ಮಂಗಳೂರು, ಮಾ 18 (DaijiworldNews/MS): ನಗರದ ಕದ್ರಿ ಉದ್ಯಾನವನವನ್ನು ಮುಂದಿನ ದಿನಗಳಲ್ಲಿ ಸುಸ್ಥಿರ ಮಾದರಿಯಲ್ಲಿ ಅಭಿವೃದ್ದಿ ಪಡಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.
ಅವರು ಮಾ.16ರಂದು ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕದ್ರಿ ಉದ್ಯಾನವನ ಅಭಿವೃದ್ದಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕದ್ರಿ ಉದ್ಯಾನವನ ಸುಸ್ಥಿರವಾಗಿ ಅಭಿವೃದ್ದಿಯಾಗಬೇಕು, ಅದಕ್ಕಾಗಿ ಪಾರ್ಕ್ ನಿರ್ವಹಣೆಗೆ ಅನುಕೂಲವಾಗುವಂತೆ ಪ್ರವೇಶ ಶುಲ್ಕ, ಅಲ್ಲಿನ ಮಳಿಗೆಗಳ ಬಾಡಿಗೆ, ವಿಡಿಯೋ, ಫೋಟೋ ಶೂಟ್, ಈವೆಂಟ್ ಹಾಗೂ ಮೇಳಗಳನ್ನು ಆಯೋಜಿಸುವ ಮೂಲಕ ಸಮಗ್ರವಾಗಿ ಅಭಿವೃದ್ದಿ ಪಡಿಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಜಿಂಕೆ ಉದ್ಯಾನವನದಲ್ಲಿರುವ ಲೇಸರ್ ಮತ್ತು ಮ್ಯೂಸಿಕಲ್ ಶೋ ಉಪಕರಣಗಳನ್ನು ಸಂಬಂಧಿಸಿದ ಎಜೆನ್ಸಿಯವರಿಂದ ನಿರ್ವಹಣೆ ಮಾಡಿಸಬೇಕು, ಮ್ಯೂಸಿಕಲ್ ಶೋ ಥೀಮ್ ಬದಲಾವಣೆ ಕುರಿತಂತೆ ಅಗತ್ಯ ಕ್ರಮ ಹಾಗೂ ವಾರಾಂತ್ಯದಲ್ಲಿ ಲೇಸರ್ ಶೋ ಮತ್ತು ಉಳಿದ ದಿನಗಳಲ್ಲಿ ಮ್ಯೂಸಿಕಲ್ ಶೋ ಆಯೋಜಿಸುವಂತೆ ಅವರು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದರು.
ಉದ್ಯಾನವನದ ಸಮಗ್ರ ಅಭಿವೃದ್ಧಿ ಕುರಿತಂತೆ ನಡೆದ ಚರ್ಚೆಯಲ್ಲಿ ಕದ್ರಿ ಮುಖ್ಯ ಉದ್ಯಾನವನದಲ್ಲಿರುವ ಲಾನ್, ಲಾನ್ ಪ್ರದೇಶದಲ್ಲಿರುವ ನೀರಿನ ಕಾರಂಜಿ, ಉದ್ಯಾನವನಕ್ಕೆ ಅವಶ್ಯಕತೆ ಇರುವ ನೀರನ್ನು ಶೇಖರಿಸಲು ಗಂಗನಪಳ್ಳ ಅಭಿವೃದ್ಧಿ ಕೈಗೊಳ್ಳಬೇಕು, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಈ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಸ್ಮಾರ್ಟ್ಸಿಟಿ ವತಿಯಿಂದ ಈಗಾಗಲೇ ಉದ್ಯಾನವನದ ಮುಂಭಾಗ ಸುಸಜ್ಜಿತವಾದ ರಸ್ತೆ ಮತ್ತು ಆಹಾರ ಮಳಿಗೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಉದ್ಯಾನವನದ 3 ಭಾಗಗಳನ್ನು ಒಟ್ಟುಗೂಡಿಸಿ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸಲು ಜಿಲ್ಲೆಯ ಸ್ಥಳೀಯ ಹೂವಿನ, ಅಲಂಕಾರಿಕ, ಔಷಧೀಯ ಸಸಿಗಳನ್ನು ನೆಡಲು ತೀರ್ಮಾನಿಸಲಾಯಿತು.
ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಪ್ರತ್ಯೇಕ ಆಟದ ಉದ್ಯಾನವನ, ಸುಸಜ್ಜಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಮತ್ತು ಶೌಚಾಲಯಗಳ ನಿರ್ಮಾಣ, ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಮಳಿಗೆಗಳು, ಮಕ್ಕಳ ಪುಟಾಣಿ ರೈಲು ಇತ್ಯಾದಿಗಳ ನಿರ್ವಹಣೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಕದ್ರಿ ಅಭಿವೃದ್ಧಿ ಸಮಿತಿಯ ಸುಪರ್ದಿಗೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಅಂತೆಯೇ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಮತ್ತು ಎರಡು ಉದ್ಯಾನವನಗಳನ್ನು ಜೋಡಣೆ ಮಾಡಿ ಉದ್ಯಾನವನವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ನಕ್ಷೆಯನ್ನು ತಯಾರಿಸಿ ಸಲ್ಲಿಸುವಂತೆ ಮಂಗಳೂರು ಸ್ಮಾರ್ಟ್ ಸಿಟಿಯ ಕನ್ಸಲ್ಟೆಂಟ್ಗೆ ತಿಳಿಸಲಾಯಿತು.
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಪಾಪಭೋವಿ, ಕದ್ರಿ ಪಾರ್ಕ್ ಅಭಿವೃದ್ದಿ ಸಮಿತಿ ಸದಸ್ಯರು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.