ಮಂಗಳೂರು, ಮಾ 18 (DaijiworldNews/MS): ಮಾ.15ರಂದು ನಸುಕಿನ ಜಾವ ಆಲಡ್ಕ ಸಮೀಪ ಮಸೀದಿಯೊಂದರ ಖಬರಿಸ್ತಾನದಲ್ಲಿ ದುಷ್ಕರ್ಮಿಗಳು ಕಲ್ಲೆಸೆದು ಸಿಮೆಂಟ್ ಶೀಟಿಗೆ ಹಾನಿಗೊಳಿಸಿರುವ ಪ್ರಕರಣವೂ ಹರೇಕಳ ಗ್ರಾಮದಲ್ಲಿ ನಡೆದಿದೆ.
ಬಿಯರ್ ಬಾಟಲಿಯನ್ನು ದಫನ ಭೂಮಿಯಲ್ಲಿ ಎಸೆದು ವಿಕೃತಿ ಮೆರೆದಿರುವ ಘಟನೆ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣದ ದಿಕ್ಕು ತಪ್ಪಿಸುವ ಸಲುವಾಗಿ ಹೊಸ ಪ್ರಕರಣವನ್ನು ಸೃಷ್ಟಿಸಲಾಗಿದೆ ಎಂದು ಡಿವೈಎಫ್ ಐ ನ ಹರೇಕಳ ಘಟಕದ ರಫೀಕ್ ತಿಳಿಸಿದ್ದಾರೆ.
ತಿಂಗಳೊಂದರ ಅವಧಿಯಲ್ಲಿ ಗ್ರಾಮದಲ್ಲಿರುವ ದೈವಸ್ಥಾನದ ನಾಮಫಲಕದಲ್ಲಿ ಅಶ್ಲೀಲ ಪದಗಳನ್ನು ಬರೆಯಲಾಗಿತ್ತು. ಅಲ್ಲದೆ ಯಕ್ಷಗಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಕಲಾದ ಬ್ಯಾನರನ್ನು ಹರಿಯಲಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಆರೋಪಿಗಳ ಪತ್ತೆಯಾಗಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣದ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.