ಮಂಗಳೂರು, ಮಾ 17 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ತೀರ್ಪು ಅತೃಪ್ತಿಕರವಾಗಿದೆ. ಇದು ಮುಸ್ಲಿಮರ ಸಾಂವಿಧಾನಿಕ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪರಿಗಣಿಸದೆ ಸರ್ಕಾರದ ಆಶಯದ ನಿರ್ಧಾರವನ್ನು ಎತ್ತಿಹಿಡಿಯುವಂತಿದೆ ಎಂದು ಮುಸ್ಲಿಂ ಒಕ್ಕೂಟಗಳು ಗುರುವಾರದಂದು ಬಂದ್ ಕರೆ ನೀಡಿದ್ದು, ನಗರದಲ್ಲಿ ಮುಸ್ಲಿಂ ಮಾಲೀಕತ್ವದ ಹಲವು ಅಂಗಡಿ, ಮಳಿಗೆಗಳು ತೆರೆಯದೆ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮುಸ್ಲಿಂ ಪರ ಸಂಘಟನೆಗಳು ರಾಜ್ಯ ಬಂದ್ಗೆ ಕರೆ ನೀಡಿದ್ದವು. ರಾಜಕೀಯ ಪಕ್ಷಗಳೂ ಬಂದ್ ಕರೆಗೆ ಬೆಂಬಲ ನೀಡಿದ್ದು, ಕೆಲವು ಸಂಘಟನೆಗಳು ಬೆಂಬಲ ನೀಡಿದ್ದು, ನಗರದಲ್ಲಿ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.
ಅಂಗಡಿಗಳನ್ನು ಮುಚ್ಚುವಂತೆ ಯಾರೂ ಇತರರನ್ನು ಒತ್ತಾಯಿಸಬಾರದು ಎಂದು ನಾವು ಸ್ಪಷ್ಟವಾಗಿ ಸೂಚಿಸಿದ್ದೇವೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಕಮಿಷನರೇಟ್ ವ್ಯಾಪ್ತಿಯಲ್ಲಿ ವ್ಯಾಪಾರ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚುವ ಅಥವಾ ಸಂಚಾರಕ್ಕೆ ಅಡ್ಡಿಪಡಿಸುವ ಘಟನೆಗಳು ವರದಿಯಾಗಿಲ್ಲ. ಕೆಲವು ಉದ್ಯಮಿಗಳು ಸ್ವಯಂಪ್ರೇರಿತವಾಗಿ ತಮ್ಮ ವ್ಯಾಪಾರವನ್ನು ಮುಚ್ಚಿದ್ದಾರೆ. ಕೆಲವು ವಾಹನಗಳು ಸಹ ಸ್ಥಗಿತಗೊಂಡಿವೆ. ಕೆಲವು ವಾಣಿಜ್ಯ ಸಂಸ್ಥೆಗಳು ಮತ್ತು ವಾಹನಗಳನ್ನು ಹೊರತುಪಡಿಸಿ, ಉಳಿದಂತೆ ಜನಜೀವನ ಸಹಜವಾಗಿದೆ ಎಂದು ತಿಳಿಸಿದ್ದಾರೆ.