ಪುತ್ತೂರು/ವಿಟ್ಲ, ಮಾ 17 (DaijiworldNews/HR): ಹಿಜಾಬ್ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಮುಖಂಡರು ಕರೆಕೊಟ್ಟ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಪುತ್ತೂರು ಮತ್ತು ವಿಟ್ಲದ ಮುಸಲ್ಮಾನ ಸಮುದಾಯ ಬೆಂಬಲ ವ್ಯಕ್ತಪಡಿಸಿದ್ದು, ಕೆಲವು ಅಂಗಡಿ ಸಂಸ್ಥೆಗಳು ವ್ಯವಹಾರ ಸ್ಥಗಿತಗೊಳಿಸಿವೆ.
ಬೆಳಗ್ಗಿನಿಂದಲೇ ಮುಸ್ಲಿಂಸಮುದಾಯಕ್ಕೆ ಸೇರಿದ ಬಹುತೇಕ ಅಂಗಡಿಗಳು, ಮಳಿಗೆಗಳು, ಹೊಟೇಲ್ ಗಳು ತೆರೆಯಲಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳು, ಮದ್ರಸಗಳಿಗೆ ರಜೆ ಸಾರಲಾಗಿದೆ. ಈ ನಡುವೆ ಮುಸ್ಲಿಮರಿಗೆ ಸೇರಿದ ಕೆಲವೊಂದು ಆಟೋ ರಿಕ್ಷಾಗಳು ಅಲ್ಲಿ ಇಲ್ಲಿ ಓಡಾಟ ನಡೆಸುತ್ತಿತ್ತು. ಪುತ್ತೂರು ಕೆಎಸ್ಸಾರ್ಟಿಸಿ ಬಸ್ನಿಲ್ದಾದ ಕಟ್ಟಡದಲ್ಲಿ ಮತ್ತು ಕಟ್ಟಡದ ಎದುರಿನ ಕಟ್ಟಡದಲ್ಲಿ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿತ್ತು. ನಗರಸಭೆ ಯ ಹಸಿ ಮತ್ತು ಒಣಮೀನು ಮಾರುಕಟ್ಟೆ ಮುಚ್ಚಲ್ಪಟ್ಟಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬಂದೋಬಸ್ತ್ನಲ್ಲಿದ್ದರು.
ಇನ್ನು ಅಮೀರ್-ಇ-ಶರಿಯತ್ ಕರ್ನಾಟಕ ಬಂದ್ ಗೆ ಕರೆ ನೀಡಿರುವುದನ್ನು ವಿಟ್ಲ ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿ ವಿಟ್ಲ ಸುತ್ತಮುತ್ತಲಿನ ವರ್ತಕರಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಎಲ್ಲ ಮುಸ್ಲಿಂ ವರ್ತಕರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.