ಉಡುಪಿ, ಮಾ 17 (DaijiworldNews/HR): ಹಿರಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬಲ್ಲಿ ಆರೋಗ್ಯ ಇಲಾಖೆಯ ವೈದ್ಯರ ಸೋಗಿನಲ್ಲಿ ಬಂದು ದಿನಗೂಲಿ ಮಾಡುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಸಾವಿರಾರು ರೂ. ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಮಾಹಿತಿ ನೀಡಿದ್ದಾರೆ.
ಕೂಲಿ ಕೆಲಸ ಮಾಡುವ ಸುಬ್ಬಣ್ಣ ಮತ್ತು ಅವರ ಪತ್ನಿ ಬೇಬಿ ಕುಲಾಲ್ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಬ್ಬರೂ ಅನಕ್ಷರಸ್ಥರಾಗಿದ್ದು, ಒಂಬತ್ತನೇ ತರಗತಿ ಓದುತ್ತಿರುವ ಮಗಳಿದ್ದಾಳೆ.
ಸುಮಾರು 4 ವರ್ಷಗಳ ಹಿಂದೆ ಬೇಬಿ ಅವರಿಗೆ ಕ್ಯಾನ್ಸರ್ ಕಾಯಿಲೆಗೆ ಕಾಣಿಸಿಕೊಂಡಿದ್ದು, 2019ರಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. 2022ರ ಫೆ.5ರಂದು ಮನೆಯಲ್ಲಿ ಬೇಬಿ ಒಬ್ಬರೇ ಇದ್ದಾಗ ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದು, ನಾವು ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಬಂದಿರುವ ವೈದ್ಯ ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಕ್ಯಾನ್ಸರ್ ಕಾಯಿಲೆಗೆ ಇನ್ನೂ ಮೂರು ಇಂಜಕ್ಷನ್ಗಳನ್ನು ನೀಡಬೇಕಾಗಿದೆ ಎಂದು ಇಲಾಖೆಗೆ ಸೂಚಿಸಿದ್ದು, ಇದರಿಂದ ನೀವು ಈಗಾಗಲೇ ಅನುಭವಿಸುತ್ತಿರುವ ನೋವು ಸಂಪೂರ್ಣವಾಗಿ ದೂರವಾಗಲಿದೆಂದು ನಂಬಿಸಿ
ಸದ್ಯ ಸರಕಾರಿ ಫಾರಮಸಿಯಲ್ಲಿ ಈ ಔಷಧಿಯ ಸ್ಟಾಕ್ ಮುಗಿದಿರುವುದರಿಂದ, ಮಂಗಳೂರಿನ ಕೆಲವು ಖಾಸಗಿ ಫಾರಮಸಿಗಳಿಂದ ನಾವೇ ಈ ಔಷಧಿ ತಂದು ನೀಡುತ್ತೇವೆ, ಅದಕ್ಕಾಗಿ ಒಟ್ಟು 18ಸಾವಿರ ರೂ. ವೆಚ್ಚವಾಗುತ್ತದೆ ಎಂದಿದ್ದರು.
ಇನ್ನು ವೈದ್ಯರ ಮೇಲೆ ಸಂಪೂರ್ಣ ನಂಬಿಕೆಯನ್ನು ಬೆಳೆಸಿಕೊಂಡಿದ್ದ ಬೇಬಿ, ತಮ್ಮಲ್ಲಿದ್ದ ಹಣ ಸಂಗ್ರಹಿಸಿ ಹಾಗೂ ಸಾಲ ಮಾಡಿಕೊಂಡು ಒಟ್ಟು 18ಸಾವಿರ ರೂ. ಹಣವನ್ನು ಅವರಿಗೆ ನೀಡಿದ್ದಾರೆ.
ತಾವು ಮೋಸ ಹೋಗಿರಬಹುದೆಂದು ಶಂಕಿಸಿದ ದಂಪತಿ, ಕುಟುಂಬದ ವೈದ್ಯೆ ಡಾ.ಸುಮ ಶಶಿಕಿರಣ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಪ್ರತಿಷ್ಠಾನವನ್ನು ಸಂಪರ್ಕಿಸಿದ ಇವರು, ತಕ್ಷಣವೇ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳೆದ ಒಂದು ತಿಂಗಳಿಂದ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ವಂಚಕರು ರೋಗಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಆರೋಪಿಗಳನ್ನು ಹಿಡಿಯಲು ಕಷ್ಟವಾಗಿದೆ ಎಂದು ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದ್ದಾರೆ.