ಕಾಸರಗೋಡು, ಮಾ. 16 (DaijiworldNews/SM): ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಕಂಡಿದ್ದ ಕನಸೊಂದನ್ನು ಯುವತಿಯೋರ್ವಳು ನನಸಾಗಿಸಿದ್ದಾಳೆ. ಶಾಲೆ ಕಾಲೇಜು ಇನ್ನಿತರ ಕಡೆಗಳಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಚಾಲಕರು ಬಸ್ ಚಲಾಯಿಸುವುದನ್ನೇ ಗಮನಿಸಿಕೊಂಡಿದ್ದ ಆ ಯುವತಿ ತಾನು ಕೂಡ ಓರ್ವ ಚಾಲಕಿಯಾಗಬೇಕೆಂದುಕೊಂಡಿದ್ದರು. ಅದರಂತೆ ಇದೀಗ ಖಾಸಗಿ ಬಸ್ ವೊಂದನ್ನು ನಿರ್ಭೀತಿಯಿಂದಲೇ ಓಡಿಸಲಾರಂಬಿಸಿದ್ದಾರೆ.
ಅಂದಹಾಗೆ ನಾವು ಮಾತನಾಡುತ್ತಿರುವುದು ಪೊಯಿನಾಚಿ ಕರಿಚ್ಚೇರಿಯ ಕೆ.ಆರ್.ಅದಿರಾ. ಇವರು, ಕಾಸರಗೋಡು-ಬಂದಡ್ಕ ರೂಟ್ ನಲ್ಲಿರುವ ಸರ್ವಿಸ್ ಬಸ್ ಶುಕ್ರಿಯಾ ಬಸ್ ಚಲಾಕಿಯಾಗಿದ್ದಾರೆ. ದ್ವಿಚಕ್ರ ವಾಹನ, ಕಾರನ್ನು ಚಲಾಯಿಸುವುದು ತುಂಬಾ ಕಷ್ಟವೇನಲ್ಲ. ಸರಿಯಾದ ತರಬೇತಿ ಪಡೆದರೆ ಯಾರು ಬೇಕಾದರೂ ಈ ವಾಹನಗಳನ್ನು ಚಲಾಯಿಸಬಹುದು. ಆದರೆ ಪ್ರಯಾಣಿಕರು ತುಂಬಿ ಬಸ್ ಓಡಿಸಲು ಚುರುಕುತನ, ಆತ್ಮವಿಶ್ವಾಸ ಹೊಂದಿರಲೇಬೇಕು. ಇವೆಲ್ಲವನ್ನು ಮೈಗೂಡಿಸಿಕೊಂಡ ಅದಿರಾ ಇದೀಗ ಜನ ಸಂದಣಿಯಿಂದ ಕೂಡಿದ ಬಸ್ಸನ್ನು ಯಾವುದೇ ಚಿಂತೆ ಆತಂಕ ಇಲ್ಲದೆ ಓಡಿಸುತ್ತಿದ್ದಾಳೆ.
ಶಾಲಾ ವಿದ್ಯಾರ್ಥಿನಿಯಾಗಿದ್ದ ಪೊಯಿನಾಚಿ ಕರಿಚ್ಚೇರಿಯ ಕೆ.ಆರ್. ಆದಿರಾ ಕಂಡಿದ್ದ ಕನಸು 22ನೇ ವಯಸ್ಸಿನಲ್ಲಿ ನನಸಾಗಿದೆ. ಸಹಪಾಠಿಗಳೊಂದಿಗೆ ಬಸ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಆದಿರಾ ಡ್ರೈವಿಂಗ್ ಸೀಟಿನಲ್ಲಿ ಕೂತು ಬಸ್ ಚಲಾಯಿಸುವ ಕನಸು ಕಂಡಿದ್ದರು. ಕಾಸರಗೋಡು-ಬಂದಡ್ಕ ಮಾರ್ಗದಲ್ಲಿ ಸಂಚರಿಸುವ ಶುಕ್ರಿಯಾ ಬಸ್ ಚಲಾಯಿಸುವ ಮೂಲಕ ಈಕೆ ತನ್ನ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಆತ್ಮ ವಿಶ್ವಾಸವಿದ್ದರೆ ಮಹಿಳೆಯರೂ ಸುಲಭವಾಗಿ ಬಸ್ ಚಲಾಯಿಸಬಹುದು ಎಂಬುದನ್ನು ಪೊಯಿನಾಚಿ ಕರಿಚೇರಿ ತೊಟ್ಟಿಯ ಕೆ.ಆರ್. ಅದಿರಾ ಸಾಬೀತು ಮಾಡಿ ತೋರಿಸಿದ್ದಾರೆ.
ಪೊಯಿನಾಚಿಯ ಮಾಶ್ ಡ್ರೈವಿಂಗ್ ಸ್ಕೂಲ್ ಮಾಲೀಕ ಕರಿಚ್ಚೇರಿ ತೊಟ್ಟಿಯ ಟಿ.ಕುಂಞಿರಾಮನ್ ಮತ್ತು ವಿ.ರತಿ ದಂಪತಿಯ ಪುತ್ರಿ ಅದಿರಾ, ತಂದೆಯಿಂದಲೇ ಡ್ರೈವಿಂಗ್ನ ಮೊದಲ ಪಾಠ ಕಲಿತಿದ್ದರು.18ನೇ ವಯಸ್ಸಿನಲ್ಲಿ ದ್ವಿಚಕ್ರ, ಲಘು ವಾಹನ ಪರವಾನಗಿ ಹಾಗೂ ಕಳೆದ ಡಿಸೆಂಬರ್ 18ರಂದು ಹೆವಿ ಲೈಸನ್ಸ್ ಪ್ರಯಾಣಿಕರ, ಗೂಡ್ಸ್ ವಾಹನ ಚಲಾಯಿಸುವ ಬ್ಯಾಡ್ಜ್ ಪಡೆದಿದ್ದರು. ಸಂಬಂಧಿಕರೊಬ್ಬರ ತರಕಾರಿ ವಿತರಣೆಯ ಪಿಕಪ್ ವ್ಯಾನ್ ಬದಲಿ ಚಾಲಕರಾಗಿಯೂ ಅವರು ದುಡಿದಿದ್ದಾರೆ.
ಆದಿರಾಳ ತಂದೆ, ಮಗಳ ಬಸ್ ಚಲಾಯಿಸುವ ಕನಸಿನ ಬಗ್ಗೆ ತನ್ನ ಸ್ನೇಹಿತ ಕಾಸರಗೋಡು-ಬಂದಡ್ಕ ನಡುವೆ ಓಡಾಡುವ ಶುಕ್ರಿಯಾ ಬಸ್ಸಿನಲ್ಲಿ ಈ ಮೊದಲು ಚಾಲಕರಾಗಿದ್ದ ಪರಂಬು ವೆಲಿಯವೀಟಿಲ್ ಕುಞಂಬು ಅವರಲ್ಲಿ ತಿಳಿಸಿದ್ದು, ಅವರು ಬಸ್ ಮಾಲೀಕ ವಿದ್ಯಾನಗರದ ಮೊಹಮ್ಮದ್ ಕುಂಞಿಗೆ ತಿಳಿಸಿ ಒಪ್ಪಿಗೆ ಪಡೆದಿದ್ದರು. ಶಂಕರಂಪಾಡಿಯಿಂದ ಪಡುಪ್ಪು ವರೆಗಿನ 2 ಕಿ.ಮೀ.ಬಸ್ ಚಲಾಯಿಸಲು ಬಸ್ ಚಾಲಕ ಸುರೇಶ್ ಸೀಟ್ ಹಾಗೂ ಸ್ಟಿಯರಿಂಗ್ ಬಿಟ್ಟು ಕೊಟ್ಟಿದ್ದು ಆದಿರಾಳ ಬಸ್ ಚಾಲನೆಯ ಕನಸು ನನಸಾಗಿದೆ.
ಜಾಗರೂಕತೆಯಿಂದ ಚಾಲನೆ ಮಾಡುತ್ತಿರುವುದನ್ನು ಬಸ್ ಸಿಬ್ಬಂದಿ ಖಚಿತಪಡಿಸಿದ ಬಳಿಕ ಪ್ರಸ್ತುತ ಎರಡು ವಾರದಿಂದ ಶಂಕರಂಪಾಡಿಯಿಂದ ಪಡುಪ್ಪುವರೆಗೆ ಆದಿರಾ ಶುಕ್ರಿಯಾ ಬಸ್ ಚಲಾಯಿಸುತ್ತಿದ್ದಾರೆ. ಸಹೋದರಿ ಕುಂಡಂಕುಯಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಕೆ.ಆರ್.ನಂದನಾ, ಬಸ್ ಚಾಲಕ ಸುರೇಶ್, ನಿರ್ವಾಹಕ ವಾರಿಜಾಕ್ಷನ್, ಸಹಾಯಕ ಸುರೇಶ್ ಮತ್ತು ಸ್ನೇಹಿತರು ಸಾಕಷ್ಟು ಪ್ರೋತ್ಸಾಹ ನೀಡುತ್ತಿರುವುದಾಗಿ ಅದಿರಾ ತಿಳಿಸಿದ್ದಾರೆ.
ಕಾಸರಗೋಡು ವಿದ್ಯಾನಗರದ ತ್ರಿವೇಣಿ ಆರ್ಟ್ಸ್ ಕಾಲೇಜಿನಲ್ಲಿ ಬಿ ಕಾಮ್ ಪೂರ್ತಿಗೊಳಿಸಿರುವ ಆದಿರಾ ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್ ಡಿಪ್ಲೊಮಾ ಕೋರ್ಸ್ ಪೂರೈಸಲು ಮತ್ತು ಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವ ಮೂಲಕ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಆಗುವ ಕನಸು ಕಂಡಿದ್ದು ತಯಾರಿ ನಡೆಸುತ್ತಿದ್ದಾರೆ.
'ಬಸ್ ಓಡಿಸುವುದು ದೊಡ್ಡ ಜವಾಬ್ದಾರಿಯುತ ಕೆಲಸವಾದರೂ ತುಂಬಾ ಆನಂದಿಸುತ್ತಿದ್ದೇನೆ.ಪ್ರಸ್ತುತ ಕಾಸರಗೋಡು ತ್ರಿವೇಣಿ ಕಾಲೇಜಿನಲ್ಲಿ ಬಿ ಕಾಮ್ ಪೂರ್ತಿಗೊಳಿಸಿದ್ದೇನೆ.ಆಟೋಮೊಬೈಲ್ ಡಿಪ್ಲೊಮಾ ಕೋರ್ಸ್ ಪೂರ್ತಿಗೊಳಿಸಿ ಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಆಗಲು ತಯಾರಿ ನಡೆಸುತ್ತಿದ್ದೇನೆ'.