Karavali
ನಿರ್ದೇಶಕ ಸತ್ಯಜಿತ್ ರೇ ಜನ್ಮಶತಮಾನೋತ್ಸವ: ಮಾಹೆ ಜಿಸಿಪಿಎಎಸ್ ನಿಂದ ಮಾರ್ಚ್ 17-19ರವರೆಗೆ ರೇ ಚಲನಚಿತ್ರೋತ್ಸವ
- Wed, Mar 16 2022 05:33:11 PM
-
ಮಣಿಪಾಲ, ಮಾ 16 (DaijiworldNews/DB): ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ (1921-2021) ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸುತ್ತಿರುವ ಮೂರು ದಿನಗಳ ರೇ ಚಲನಚಿತ್ರೋತ್ಸವವನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಮಾರ್ಚ್ 17 ರಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಮತ್ತು ಎಲ್ಲಾ ಚಿತ್ರ ಪ್ರದರ್ಶನಗಳು ಮಾಹೆ ಮಣಿಪಾಲದ ತಾರಾಲಯ ಸಂಕೀರ್ಣದ ಸಭಾಂಗಣದಲ್ಲಿ ನಡೆಯಲಿದೆ. ಮಾರ್ಚ್ 17ರಿಂದ 19ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ.
ಮಾಹೆಯ ಉಪ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆಯ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸತ್ಯಜಿತ್ ರೇ ಕುರಿತು ಶಿಖರೋಪನ್ಯಾಸವನ್ನು ಗಿರೀಶ್ ಕಾಸರವಳ್ಳಿ ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನಾ ಚಿತ್ರ ’ಪಥೇರ್ ಪಾಂಚಾಲ’ ಪ್ರದರ್ಶನಗೊಳ್ಳಲಿದೆ.
18ರಂದು ರೇ ಅವರ ರವೀಂದ್ರನಾಥ ಟ್ಯಾಗೋರ್ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನದೊಂದಿಗೆ ಪ್ರಾರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಅವರ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಣದ ಕುರಿತ ಸಂವಾದ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಕಾಂಚನಜುಂಗಾ, ಸಂಜೆ 4.30ಕ್ಕೆ ಮಹಾನಗರ, ಸಂಜೆ 7 ಘರೆ-ಬೈರೆ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
19ರಂದು ಬೆಳಗ್ಗೆ 9.15ಕ್ಕೆ ಕಾಸರವಳ್ಳಿಯವರ 'ಜಾಗತಿಕ ಚಲನಚಿತ್ರಗಳತ್ತ ಒಂದು ನೋಟ' ಕುರಿತ ವಿಶೇಷ ಉಪನ್ಯಾಸದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಆ ದಿನವೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭವು ನಡೆಯಲಿದೆ.
ಮಾಹೆಯ ಕಾರ್ಯಕಾರಿ ಉಪಾಧ್ಯಕ್ಷ ಡಾ. ವಿನೋದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಣಿಪಾಲದ ಎಂಸಿಎನ್ಎಸ್ನ ನಿರ್ದೇಶಕ ಡಾ. ಪೃಥ್ವಿರಾಜ್ ಎಂ. ಭಾಗವಹಿಸಲಿದ್ದಾರೆ. ಬೆಳಗ್ಗೆ 11.15ಕ್ಕೆ ಆಗಂತುಕ್ ಪ್ರದರ್ಶನಗೊಳ್ಳಲಿದೆ.ಚಲನಚಿತ್ರಗಳು
ಪಥೇರ್ ಪಾಂಚಾಲಿ
ಪಥೇರ್ ಪಾಂಚಾಲಿ ಸತ್ಯಜಿತ್ ರೇ ಬರೆದು ನಿರ್ದೇಶಿಸಿದ 1955 ರ ಭಾರತೀಯ ಬಂಗಾಳಿ ಭಾಷೆಯ ಚಲನಚಿತ್ರವಾಗಿದೆ. ಇದು ಬಿಭೂತಿಭೂಷಣ ಬಂಡೋಪಾಧ್ಯಾಯ 1929 ರಲ್ಲಿ ಬರೆದ ಅದೇ ಹೆಸರಿನ ಬಂಗಾಳಿ ಕಾದಂಬರಿಯ ರೂಪಾಂತರ ಮತ್ತು ರೇ ಅವರ ಚೊಚ್ಚಲ ನಿರ್ದೇಶನದ ಚಲನಚಿತ್ರ. ದಿ ಅಪು ಟ್ರೈಲಾಜಿಯ ಮೊದಲ ಚಿತ್ರ ಇದಾಗಿದ್ದು, ಪಥೇರ್ ಪಾಂಚಾಲಿ ನಾಯಕ ಅಪು (ಸುಬೀರ್ ಬ್ಯಾನರ್ಜಿ) ಮತ್ತು ಅವನ ಅಕ್ಕ ದುರ್ಗಾ (ಉಮಾ ದಾಸ್ಗುಪ್ತ) ಅವರ ಬಡತನದ ನಡುವಿನ ಬಾಲ್ಯದ ಕತೆಯನ್ನು ಇದು ಚಿತ್ರಿಸುತ್ತದೆ.ಅಂತಾರಾಷ್ಟ್ರೀಯ ಗಮನವನ್ನು ಸೆಳೆದ ಈ ಚಿತ್ರ 1955 ರಲ್ಲಿ ಅತ್ಯುತ್ತಮ ಚಲನಚಿತ್ರವಾಗಿ ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1956 ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ರೇ ಉತ್ತಮ ನಿರ್ದೇಶಕನಾಗಿ ರೂಪುಗೊಳ್ಳುವಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸುತ್ತದೆ.
ರವೀಂದ್ರನಾಥ ಟ್ಯಾಗೋರ್ (ಸಾಕ್ಷ್ಯಚಿತ್ರ)
ರವೀಂದ್ರನಾಥ ಟ್ಯಾಗೋರ್ 1961 ರ ಭಾರತೀಯ ಸಾಕ್ಷ್ಯಚಿತ್ರವಾಗಿದ್ದು, ಪ್ರಸಿದ್ಧ ಬಂಗಾಳಿ ಲೇಖಕ ರವೀಂದ್ರನಾಥ ಟ್ಯಾಗೋರ್ ಅವರ ಜೀವನ ಮತ್ತು ಕೃತಿಗಳ ಬಗ್ಗೆ ಸತ್ಯಜಿತ್ ರೇ ಬರೆದು ನಿರ್ದೇಶಿಸಿದ್ದಾರೆ. ಕಪ್ಪು-ಬಿಳುಪಿನಲ್ಲಿ ಚಿತ್ರೀಕರಿಸಿದ, ಚಿತ್ರವು ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಬಿಡುಗಡೆಯಾಯಿತು. ಸತ್ಯಜಿತ್ ರೇ ಅವರ ಈ ಸಾಕ್ಷ್ಯಚಿತ್ರ ಟ್ಯಾಗೋರರ ಬೋಧನೆಗಳು ಮತ್ತು ತತ್ತ್ವಶಾಸ್ತ್ರದ ನಿಜವಾದ ಸಾರವನ್ನು ಸೆರೆಹಿಡಿಯುತ್ತದೆ ಮತ್ತು ಇಲ್ಲಿಯವರೆಗೆ ರವೀಂದ್ರನಾಥ ಟ್ಯಾಗೋರ್ ಅವರ ಜೀವನ ಮತ್ತು ಸಾಹಿತ್ಯದ ಕುರಿತು ನಿರ್ಮಿಸಿದ ಸಾಕ್ಷ್ಯಚಿತ್ರಗಳ ಸಾಲಿನಲ್ಲಿ ಶ್ರೇಷ್ಠವೆನಿಸಿದೆ.ಕಾಂಚನಜುಂಗಾ
ಕಾಂಚನಜುಂಗಾ ಎಂಬುದು ಸತ್ಯಜಿತ್ ರೇ ನಿರ್ದೇಶಿಸಿದ 1962 ರ ಭಾರತೀಯ ಚಲನಚಿತ್ರವಾಗಿದೆ. ಈ ಚಲನಚಿತ್ರವು ಡಾರ್ಜಿಲಿಂಗ್ನಲ್ಲಿ ವಿಹಾರಕ್ಕೆಂದು ತೆರಳುವ ಉನ್ನತ-ವರ್ಗದ ಬಂಗಾಳಿ ಕುಟುಂಬದ ಸುತ್ತ ನಡೆಯುವ ಕತೆಯಾಗಿದೆ. ಸತ್ಯಜಿತ್ ರೇ ಅವರು ಕಾಂಚನಜುಂಗದ ಚಿತ್ರಕಥೆಯನ್ನು ಹತ್ತು ದಿನಗಳಲ್ಲಿ ಬರೆದರು ಮತ್ತು ಇಡೀ ಚಿತ್ರವನ್ನು 24 ದಿನಗಳಲ್ಲಿ ಚಿತ್ರೀಕರಿಸಿದರು. ಈ ಚಿತ್ರವು ಹಿಮಾಲಯ ಪರ್ವತ ಶ್ರೇಣಿಯಿಂದ ಸ್ಫೂರ್ತಿ ಪಡೆದಿದೆ. ಕಾಂಚನಜುಂಗ ರೇ ಅವರ ಮೊದಲ ಮೂಲ ಚಿತ್ರಕಥೆಯಾಗಿದ್ದು, ರೇ ಅವರ ಮೊದಲ ವರ್ಣ ಚಿತ್ರ. ಸಾಮಾನ್ಯ ರೇ ಚಿತ್ರಗಳಿಗಿಂತ ಭಿನ್ನವಾಗಿ, ಇದು ಯಾವುದೇ ಕೇಂದ್ರ ಪಾತ್ರಗಳಿಲ್ಲದ ಮತ್ತು ಶಾಸ್ತ್ರೀಯ ಅರ್ಥದಲ್ಲಿ ನೇರ ನಿರೂಪಣೆಯಿಲ್ಲದ ರೇಖಾತ್ಮಕ ನಿರೂಪಣೆಯನ್ನು ಹೊಂದಿದೆ.ಮಹಾನಗರ
ಮಹಾನಗರ 1963 ರ ಚಲನಚಿತ್ರವಾಗಿದ್ದು, ಸತ್ಯಜಿತ್ ರೇ ಬರೆದು ನಿರ್ದೇಶಿಸಿದ್ದಾರೆ. ನರೇಂದ್ರನಾಥ್ ಮಿತ್ರ ಅವರ ಅಬತರಣಿಕ ಎಂಬ ಸಣ್ಣ ಕಥೆಯನ್ನು ಆಧರಿಸಿ ದ ಇದರಲ್ಲಿ ಮಾಧಬಿ ಮುಖರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೇಲ್ಸ್ ವಿಮೆನ್ ಆಗಿ ಕೆಲಸವನ್ನು ಪಡೆಯುವ ಮೂಲಕ ತನ್ನ ಸಾಂಪ್ರದಾಯಿಕ ಕುಟುಂಬವನ್ನು ಗೊಂದಲಕ್ಕೀಡು ಮಾಡುವ ಗೃಹಿಣಿಯ ಕಥೆಯನ್ನು ಈ ಚಿತ್ರವು ಹೇಳುತ್ತದೆ. ಹಿಂದಿ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಜಯ ಭಾದುರಿ ಅವರನ್ನು ತೆರೆಯ ಮೇಲೆ ಈ ಚಿತ್ರ ಪರಿಚಯಿಸಿತು.ಇದು ಸಂಪೂರ್ಣವಾಗಿ ಸ್ಥಳೀಯ ಕಲ್ಕತ್ತಾದಲ್ಲಿ ಚಿತ್ರೀಕರಿಸಿದ ರೇ ಅವರ ಮೊದಲ ಚಿತ್ರವಾಗಿದೆ. ಇದು ನಗರದ ಮಧ್ಯಮ ವರ್ಗದ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಮಹಿಳೆಯರು ಮನೆಯ ಹೊರಗೆ ದುಡಿಯುವುದು ವಿಮೋಚನೆಯ ಕಲ್ಪನೆಗಳಿಂದಲ್ಲ, ಬದಲಾಗಿ ಆರ್ಥಿಕ ಅಗತ್ಯವಾಗಿದೆ. ಮಹಿಳೆಯ ಆತ್ಮವಿಶ್ವಾಸ ಪಿತೃಪ್ರಭುತ್ವದ ವರ್ತನೆಗಳು ಮತ್ತು ಸಾಮಾಜಿಕ ಚಲನಶೀಲತೆಯ ಮೇಲೆ ಹೇಗೆ ಪರಿಣಾಮಗಳನ್ನು ಬೀರುತ್ತದೆ ಎಂದು ಈ ಚಲನಚಿತ್ರವು ಪರಿಶೀಲಿಸುತ್ತದೆ.
ಘರೆ ಬೈರೆ
ಘರೆ ಬೈರೆ 1984 ರ ಭಾರತೀಯ ಬಂಗಾಳಿ ಭಾಷೆಯ ಚಲನಚಿತ್ರ. ಇದನ್ನು ಸತ್ಯಜಿತ್ ರೇ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಅದೇ ಹೆಸರಿನ ರವೀಂದ್ರನಾಥ ಟ್ಯಾಗೋರ್ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರದಲ್ಲಿ ಸೌಮಿತ್ರ ಚಟರ್ಜಿ, ವಿಕ್ಟರ್ ಬ್ಯಾನರ್ಜಿ, ಜೆನ್ನಿಫರ್ ಕೆಂಡಾಲ್ ಮತ್ತು ಸ್ವಾತಿಲೇಖಾ ಚಟರ್ಜಿ ನಟಿಸಿದ್ದಾರೆ. ಮಹಿಳಾ ವಿಮೋಚನೆಯ ವಿಷಯದೊಂದಿಗೆ ವ್ಯವಹರಿಸುವ ಚಿತ್ರ ಇದಾಗಿದ್ದು, ರೇ ಅವರು ತಮ್ಮ ಮೊದಲ ಚಿತ್ರ ಪಥೇರ್ ಪಾಂಚಾಲಿಯನ್ನು ಮಾಡುವ ಮೊದಲೇ 1940 ರ ದಶಕದಲ್ಲಿ ಇದರ ಚಿತ್ರಕತೆಯನ್ನು ಸಿದ್ಧಪಡಿಸಿದರು. ಈ ಚಲನಚಿತ್ರವು 1984 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಮ್ ಡಿ'ಓರ್ ಡಿ'ಓರ್ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿತ್ತು. 32 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇದು ಬೆಂಗಾಲಿಯಲ್ಲಿ ಅತ್ಯುತ್ತಮ ಚಲನಚಿತ್ರ ವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಆಗಂತುಕ್
ಸತ್ಯಜಿತ್ ರೇ ಅವರು ಮಾಡಿದ ಎಲ್ಲಾ ಚಲನಚಿತ್ರಗಳಲ್ಲಿ, ಬಹುಶಃ ಅತ್ಯಂತ ಬೌದ್ಧಿಕ, ಹೆಚ್ಚು ಚಿಂತನೆಗೆ ಪ್ರೇರೇಪಿಸುವ ಮತ್ತು ನಮ್ಮನ್ನು ನಾವು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡುವುದು ಅವರ ಅಂತಿಮ ಚಿತ್ರ ಆಗಂತುಕ್. ಈ ಚಿತ್ರವು ರೇ ಅವರೇ ಬರೆದ ಕಥೆಯನ್ನು ಆಧರಿಸಿದೆ ಎಂದು ಕೆಲವೇ ಜನರಿಗೆ ತಿಳಿದಿದೆ. 1992ರಲ್ಲಿ, ಸತ್ಯಜಿತ್ ರೇ ನಿಧನರಾಗುವ ಕೆಲವೇ ತಿಂಗಳುಗಳ ಮೊದಲು, ಅವರು ನಮಗೆ ಆಗಂತುಕ್ ನೀಡಿದರು.ಇದು ರೇ ಅವರ ಕೊನೆಯ ಚಿತ್ರವೆಂದು ಹೆಚ್ಚು ಮಹತ್ವ ಪಡೆಯುತ್ತದೆ ಮತ್ತು ಅವರ ಸ್ವಂತ ಸಣ್ಣ ಕಥೆಗಳಲ್ಲಿ ಒಂದಾದ 'ಅತಿಥಿ'ಯನ್ನು ಆಧರಿಸಿದೆ. ಚಿತ್ರವು ಬಿಡುಗಡೆಯಾದ ಮೇಲೆ ವಿಮರ್ಶಕರ ಮೆಚ್ಚುಗೆ ಗಳಿಸಿತು. ಈ ಚಲನಚಿತ್ರವು 1992 ರಲ್ಲಿ ಕ್ಯಾಹಿಯರ್ಸ್ ಡು ಸಿನಿಮಾದ ವರ್ಷದ ಟಾಪ್ 10 ಚಲನಚಿತ್ರಗಳ ಪಟ್ಟಿಯಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿತು. ಸ್ಯಾನ್ ಫ್ರಾನ್ಸಿಸ್ಕೋ ಕ್ರಾನಿಕಲ್ನ ಲೇಹ್ ಗಾರ್ಚಿಕ್ ಈ ಚಲನಚಿತ್ರವನ್ನು "ರೇ ಅವರ 30 ಚಿತ್ರಗಳ ವೃತ್ತಿಜೀವನದ ಅಮೋಘ ಅಂತ್ಯ ಎಂದು ಬಣ್ಣಿಸಿದ್ದಾರೆ. ಇದು 1992 ರಲ್ಲಿ ಭಾರತದ ವರ್ಷದ ಚಲನಚಿತ್ರವಾಗಿತ್ತು.
ಜಿಸಿಪಿಎಎಸ್ ಮಾಹೆ ಕುರಿತು
ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿಶ್ವದ ಸಮಕಾಲೀನ ಬಿಕ್ಕಟ್ಟುಗಳನ್ನು ಎದುರಿಸಲು ಪರ್ಯಾಯ ಜ್ಞಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಂತರಶಿಸ್ತೀಯ ಬೋಧನೆ ಮತ್ತು ಸಂಶೋಧನೆಯೊಂದಿಗೆ ತೊಡಗಿರುವ ಮಾಹೆಯ ವಿಭಾಗವಾಗಿದೆ. GCPAS ಸೌಂದರ್ಯಶಾಸ್ತ್ರ, ತತ್ತ್ವಶಾಸ್ತ್ರ, ಪರಿಸರ ವಿಜ್ಞಾನ, ಪತ್ರಿಕೋದ್ಯಮ, ಗಾಂಧಿ ಅಧ್ಯಯನ ಮತ್ತು ಶಾಂತಿ ಅಧ್ಯಯನಗಳ ಜೊತೆಗೆ ತನ್ನನ್ನು ತೊಡಗಿಸಿಕೊಂಡಿದೆ.ಪದವಿ ಮತ್ತು ಸ್ನಾತಕೋತ್ತರ ಪದವಿ
ಎಂಎ (ಇಕೋಸೊಫಿಕಲ್ ಎಸ್ಥೆಟಿಕ್ಸ್) - ಮೊದಲ ಬಾರಿಗೆ, ''ಕಲಾ ಬರಹಗಾರರ'' ಅಗತ್ಯವನ್ನು ಪೂರೈಸುವ ಉದ್ದೇಶದಿಂದ ಆರಂಭಿಸಿರುವ ಎರಡು ವರ್ಷಗಳ ಕಾರ್ಯಕ್ರಮವಾಗಿದೆ. ಇದು ಮೂಲಭೂತವಾಗಿ "ಪರಿಸರಶಾಸ್ತ್ರದ ದೃಷ್ಟಿಕೋನದ ಕಲಾ ಪತ್ರಿಕೋದ್ಯಮ". ಪರಿಸರ ಅಧ್ಯಯನ ಮತ್ತು ತತ್ವಶಾಸ್ತ್ರವನ್ನು ಇದು ಸಂಯೋಜಿಸುತ್ತದೆ. ಈ ಕಾರ್ಯಕ್ರಮವು ಎಲ್ಲಾ ಕಲಾ ಪ್ರಕಾರಗಳ ತಾತ್ವಿಕ ಅಧ್ಯಯನವನ್ನು ಒಳಗೊಂಡಿದೆ - ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ, ಸಿನಿಮಾ, ಚಿತ್ರಕಲೆ, ಇತ್ಯಾದಿಗಳ ಕುರಿತ ಬರವಣಿಗೆಯ ಮೇಲೆ ಈ ಕಾರ್ಯಕ್ರಮ ಕೇಂದ್ರಿತವಾಗಿದೆ ಮತ್ತು ಇದು ಪರಿಸರ ಅಧ್ಯಯನದೊಂದಿಗೆ ಮಿಳಿತಗೊಂಡಿದೆ.ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್)- ಒಂದು ಹೊಸ ರೀತಿಯ ಸ್ನಾತಕೋತ್ತರ ಕಾರ್ಯಕ್ರಮ, ಇದು ತಾತ್ವಿಕ ದೃಷ್ಟಿಕೋನದಿಂದ ಕಲೆ ಮತ್ತು ಶಾಂತಿ ಅಧ್ಯಯನಗಳನ್ನು ಜೋಡಿಸಲು ಪ್ರಯತ್ನಿಸುತ್ತದೆ. ಇದು ಸಮಾಜ, ರಾಜಕೀಯ, ಅಭಿವೃದ್ಧಿ ಅಧ್ಯಯನ, ಲಿಂಗ ಅಧ್ಯಯನ, ಗಾಂಧಿ ಅಧ್ಯಯನ, ಪತ್ರಿಕೋದ್ಯಮ, ಮಾಧ್ಯಮ ಮತ್ತು ಅಂತರಾಷ್ಟ್ರೀಯ ಶಾಂತಿ, ಮತ್ತು ಸಂಗೀತ, ನೃತ್ಯ, ರಂಗಭೂಮಿ, ದೃಶ್ಯ ಕಲೆಗಳು ಮತ್ತು ಸಿನೆಮಾದಂತಹ ವಿವಿಧ ಪ್ರಕಾರದ ಕಲೆಗಳನ್ನು ಒಳಗೊಂಡಿದೆ.
ಬಿಎ (ಆರ್ಟ್ ಅಂಡ್ ಎಸ್ಥೆಟಿಕ್ಸ್) - ವಿವಿಧ ಅಧ್ಯಯನ ಆಸಕ್ತಿಗಳನ್ನು ಪೂರೈಸುವ ಮತ್ತು ಕೆಲವು ನಿರ್ದಿಷ್ಟ ಕೌಶಲ್ಯಗಳನ್ನು ಗೌರವಿಸುವ ಸೌಂದರ್ಯಶಾಸ್ತ್ರ ಮತ್ತು ಶಾಂತಿ ಅಧ್ಯಯನಗಳ ವಿಶಾಲ ಚೌಕಟ್ಟಿನೊಂದಿಗೆ ಲಿಬರಲ್ ಆರ್ಟ್ಸ್ / ಮಾನವಿಕ ಶಾಸ್ತ್ರ ಮತ್ತು ಸಾಮಾಜಿಕ ವಿಜ್ಞಾನಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಾಧ್ಯಮ ಮತ್ತು ಕಲಾ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಾಗಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ.