ಉಡುಪಿ, ಮಾ 16 (DaijiworldNews/DB): ಹೈ ಕೋರ್ಟ್ ಆದೇಶದಿಂದ ಹಿಜಾಬ್ ಕುರಿತು ಎದ್ದಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನಲ್ಲಿ ತೀರ್ಪು ಬಂದಿದೆ. ನ್ಯಾಯಾಂಗ, ಸಂವಿಧಾನದ ಎದುರು ಯಾವುದೇ ಧರ್ಮ ಮುಖ್ಯವಲ್ಲ ಎಂದು ಉಡುಪಿಯ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಆಡಳಿತ ಮಂಡಳಿ ನಿರ್ಣಯ ವಿರುದ್ದ ಕೋರ್ಟ್ ಗೆ ಹೋಗಿದ್ದರು. ಇದೀಗ ಕೋರ್ಟ್ ತೀರ್ಪು ಬಂದಿದ್ದು, ಹಿಜಾಬ್ ನ್ನು ಶಿಕ್ಷಣ ಸಂಸ್ಥೆಗಳಲ್ಲಿ ಧರಿಸುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ. ಆದರೆ ನ್ಯಾಯಾಂಗ ವ್ಯವಸ್ಥೆಯನ್ನೇ ಕೆಲವರು ಪ್ರಶ್ನೆ ಮಾಡುತ್ತಿರುವುದು ವಿಪರ್ಯಾಸ ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ವ್ಯವಸ್ಥೆ ಇದೆ. ಅದನ್ನು ಪಾಲಿಸುವುದು ಅವಶ್ಯ. ಕಾನೂನು ಗೌರವಿಸುವವರಿಗೆ ಮಾತ್ರ ಕಾಲೇಜಿನಲ್ಲಿ ಅವಕಾಶವಿದೆ. ಸಿಎಫ್ ಐ ನ ಪೇಯ್ಡ್ ನಾಯಕರು ಈ ಹಿಂದೆ ಸಾಕಷ್ಟು ಹೇಳಿಕೆ ನೀಡುತ್ತಿದ್ದರು. ಆದೇಶ ಬಂದ ನಂತರ ಬೇರೆಯದೇ ಮಾತನಾಡುತ್ತಿದ್ದಾರೆ. ಕರಾವಳಿಯಲ್ಲಿ ಅಶಾಂತಿ ಇವರ ಉದ್ದೇಶ ಎಂದವರು ಆಪಾದಿಸಿದರು.