ಕುಂದಾಪುರ, ಮಾ 16 (DaijiworldNews/DB): ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂಬುದಾಗಿ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಬುಧವಾರ ಶಾಲಾ-ಕಾಲೇಜು ತರಗತಿಗಳು ಪುನರಾರಂಭವಾಗಿದೆ. ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುವುದಾಗಿ ಪಟ್ಟು ಹಿಡಿದಿದ್ದ ಕುಂದಾಪುರದ ಜೂನಿಯರ್ ಕಾಲೇಜಿನ 13 ವಿದ್ಯಾರ್ಥಿನಿಯರ ಪೈಕಿ 11 ಮಂದಿ ಗೈರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗೆ ಹಾಜರಾಗಿದ್ದಾರೆ.
ವಿವಾದ ಮೊದಲು ಆರಂಭವಾದ ಕುಂದಾಪುರದ ಜೂನಿಯರ್ ಕಾಲೇಜಿನಲ್ಲಿ ಬುಧವಾರ ಪ್ರಥಮ ಪಿಯುಸಿ ತರಗತಿಗಳು ಮಾತ್ರ ಆರಂಭವಾಗಿದೆ. ಕಾಲೇಜಿಗೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಗೇಟ್ ಬಳಿ ಪ್ರಾಂಶುಪಾಲರು, ಉಪನ್ಯಾಸಕರು ವಿದ್ಯಾರ್ಥಿನಿಯರನ್ನು ತಪಾಸಣೆ ನಡೆಸಿಯೇ ತರಗತಿಗೆ ಬಿಡುತ್ತಿದ್ದಾರೆ.
ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದ 13 ವಿದ್ಯಾರ್ಥಿನಿಯರ ಪೈಕಿ 11 ಮಂದಿ ತರಗತಿಗೆ ಹಾಜರಾಗದೆ ಗೈರಾಗಿದ್ದಾರೆ. ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗೆ ಹಾಜರಾಗಿದ್ದಾರೆ.
ಕುಂದಾಪುರದ ಜೂನಿಯರ್ ಕಾಲೇಜಿನ 13 ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ರಾಜ್ಯಾದ್ಯಂತ ಈ ಘಟನೆ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಮಂಗಳವಾರ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲವೆಂದು ಪ್ರಕಟಿಸಿತ್ತು.