ವಿಟ್ಲ, ಮಾ. 15 (DaijiworldNews/SM): ವ್ಯಕ್ತಿಯೋರ್ವರು ತೆಂಗಿನ ಮರದಿಂದ ಕಾಯಿ ಕಿತ್ತ ವಿಚಾರಕ್ಕೆ ಸಂಬಂದಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪಾವಲುಮೂಲೆ ನಿವಾಸಿ ಸುಂದರ ನಾಯ್ಕ್ ಪುತ್ರಿ ಮಮತಾ ದೂರುದಾರರಾಗಿದ್ದು, ಸ್ಥಳೀಯ ನಿವಾಸಿ ವಾಮನ ನಾಯ್ಕ್ ಪ್ರಕರಣದ ಆರೋಪಿಯಾಗಿದ್ದಾರೆ.
ಮಾ.೧೪ರಂದು ನಾನು ಮನೆಯಲ್ಲಿದ್ದ ವೇಳೆ ವಾಮನ ನಾಯ್ಕ್ ರವರು ಬಂದು ನನ್ನ ತಂದೆ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಸಿದ ವಿಚಾರವಾಗಿ ಅವರಿಗೆ ಬೈಯಲಾರಂಬಿಸಿದರು. ಇದನ್ನು ಪ್ರಶ್ನಿಸಲು ತೆರಳಿದ ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ನನ್ನ ತಾಯಿ ಹಾಗೂ ತಂದೆಯವರಿಗೂ ಹಲ್ಲೆ ನಡೆಸಿ ನಮಗೆ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಮಮತಾ ರವರು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆಯಿಂದ ಗಾಯಗೊಂಡ ಮಮತ ಹಾಗೂ ಅವರ ತಂದೆ ತಾಯಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.