ಉಡುಪಿ, ಮಾ 15 (DaijiworldNews/DB): ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಹಿಜಾಬ್ ಮತ್ತು ಕೇಸರಿ ಕ್ಲಾಸ್ ರೂಂಗಳಲ್ಲಿ ಬೇಡ. ನ್ಯಾಯಾಲಯ ಇದಕ್ಕೆ ತಾರ್ಕಿಕ ಅಂತ್ಯ ನೀಡಿದೆ ಎಂದು ಉಡುಪಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಪ್ರಶಾಂತ್ ನಾಯಕ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಗೆ ಹೋಗಲು ಅವರು ಸ್ವತಂತ್ರರು. ಇದು ಯಾವುದೇ ಸೋಲು ಗೆಲುವಿನ ವಿಚಾರವಲ್ಲ. ಸಮಾಜದಲ್ಲಿ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಅಸಮಾನತೆಯನ್ನು ದೂರ ಮಾಡುವ ಕಾರಣಕ್ಕಾಗಿಯೇ ಸಮವಸ್ತ್ರ ವ್ಯವಸ್ಥೆಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಲಾಗಿದೆ. ಪ್ರಧಾನಿ ಮೋದಿಯವರ ಆಸೆಯಂತೆ ತರಗತಿಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನು ಪಾಲಿಸಬೇಕು. ಚೌತಿ, ಶಾರದ ಪೂಜೆ ವಿಷಯಕ್ಕೆ ಬರುವ ಅಧಿಕ ಪ್ರಸಂಗ ಬೇಡ. ಇದು ಭರತ ಭೂಮಿ. ಇಲ್ಲಿ ಏನು ಆಗಬೇಕಾಗಿದೆ ಅದು ಆಗಿಯೇ ಆಗುತ್ತದೆ ಎಂದ ಅವರು, ಆ ಆರು ಜನ ಮಕ್ಕಳು ನಿರಪರಾಧಿಗಳು. ಅವರಿಗೆ ತರಬೇತಿ ನೀಡಿ ಅವರಿಂದ ಹಿಜಾಬ್ ವಿವಾದ ಸೃಷ್ಟಿಸಲಾಗಿದೆ. ಸಿಎಫ್ ಐ ಈ ರೀತಿ ಮಾಡಿರುವುದು ಸಾಬೀತಾಗಿದೆ ಎಂದು ತಿಳಿಸಿದರು.
ಮಕ್ಕಳ ದಾರಿ ತಪ್ಪಿಸಿ ಇಡೀ ಮುಸ್ಲಿಂ ಜನಾಂಗವನ್ನೇ ಕೆಟ್ಟ ಭಾವನೆಯಿಂದ ನೋಡುವ ಹಾಗೆ ಮಾಡಬೇಡಿ. ಯಾರೋ ಕೆಲವರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂದರು.