ಉಡುಪಿ, ಮಾ 15 (DaijiworldNews/HR): ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ದೇಶದ ಮಕ್ಕಳ ಶೈಕ್ಷಣಿಕ ಹಕ್ಕನ್ನು ಕೋರ್ಟ್ ಎತ್ತಿ ಹಿಡಿಯುವ ನಂಬಿಕೆಯಿದೆ ಎಂದು ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗಲಿದ್ದು, ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂಬ ನಿರೀಕ್ಷೆಯಿದೆ. ದೇಶದ ಮಕ್ಕಳ ಶೈಕ್ಷಣಿಕ ಹಕ್ಕನ್ನು ಕೋರ್ಟ್ ಎತ್ತಿ ಹಿಡಿಯಲಿದೆ. ಶೈಕ್ಷಣಿಕ ವಾತಾವರಣದಲ್ಲಿ ಧಾರ್ಮಿಕ ಹಕ್ಕುಗಳ ಹೇರಿಕೆ ಎಷ್ಟು ಸರಿ ಎನ್ನುವ ಬಗ್ಗೆ ಕೋರ್ಟು ತೀರ್ಪು ನೀಡಲಿದೆ ಎಂದರು.
ಇನ್ನು 6 ವಿದ್ಯಾರ್ಥಿನಿಯರನ್ನು ಮೂಲಭೂತವಾದಿ ಸಂಘಟನೆಗಳು ದುರುಪಯೋಗ ಪಡಿಸಿಕೊಂಡಿದ್ದು, ಅವರಿಗೂ ತಮ್ಮ ತಪ್ಪಿನ ಅರಿವು ಆಗಿರಬಹುದು. ನ್ಯಾಯಾಲಯವು ಎಲ್ಲಾ ರಾಜ್ಯದ ನ್ಯಾಯಾಧೀಶರ ಜೊತೆ ಚರ್ಚಿಸಿ ತೀರ್ಪು ನೀಡಲಿದೆ ಎಂದಿದ್ದಾರೆ.
ಹಿಜಾಬ್ ವಿವಾದ ಸಾಂವಿಧಾನಿಕ ವಿಚಾರವಾದ ಕಾರಣ ವಿಸ್ತೃತವಾದ ವಿಚಾರಣೆ ಮತ್ತು ಚರ್ಚೆಗಳು ನಡೆದಿವೆ. ಹಾಗಾಗಿ ಸುಪ್ರೀಂಕೋರ್ಟಿಗೆ ಹೋದರೂ ಇದೇ ತೀರ್ಪು ಅಂತಿಮ ಎಂದು ಹೇಳಿದ್ದಾರೆ.