ಮಂಗಳೂರು,ಮಾ 15 (DaijiworldNews/MS): ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ಕರಕುಶಲ ವಸ್ತುಗಳಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆಯುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಅವರು ಕರೆ ನೀಡಿದರು.
ಅವರು ಮಾರ್ಚ್ 14ರ ಸೋಮವಾರ ವುಡ್ಲ್ಯಾಂಡ್ಸ್ ಹೋಟೆಲ್ ಆವರಣದಲ್ಲಿ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ-ಅಭಿವೃದ್ದಿ ಆಯುಕ್ತರ ಕಚೇರಿ ಹಾಗೂ ಮಂಗಳೂರಿನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಶಿಲ್ಪ ಬಜಾರ್ (ಕರಕುಶಲ ಮೇಳ) ಗೆ ಚಾಲನೆ ನೀಡಿ ಮಾತನಾಡಿದರು.
ದೇಶದ ವಿವಿಧ ಭಾಗಗಳ ನುರಿತ ಕರಕುಶಲ ಕಲಾವಿದರು ತಯಾರಿಸಿದ ಆಕರ್ಷಣಿಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ, ಮೇಳಗಳನ್ನು ಆಯೋಜಿಸುವ ಮೂಲಕ ಸರ್ಕಾರಗಳು ಕುಶಲಕರ್ಮಿಗಳಿಗೆ ಮಾರುಕಟ್ಟೆಯ ಸೌಲಭ್ಯ ನೀಡುತ್ತಿವೆ, ದುಬೈನಲ್ಲೂ ಕೂಡ ಕರಕುಶಲ ಮೇಳಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದವರು ಹೇಳಿದರು.
ಹಿಂದೆ ಮಣ್ಣಿನ ಪಾತ್ರೆಗಳಿಗೆ ಪ್ರಾಮುಖ್ಯತೆ ಇತ್ತು, ಮೀನಿನ ಪದಾರ್ಥಕ್ಕೆ ಮಣ್ಣಿನ ಪಾತ್ರೆಗಳು ಅತ್ಯುತ್ತಮ ಎಂದು ಸಾಬೀತಾಗಿದೆ, ಮುಂಬೈನಿಂದ ಬರುವ ಮಹಿಳೆಯರು ಮಣ್ಣಿನ ಪಾತ್ರೆಗಳನ್ನು ಬಗ್ಗೆ ಆಸಕ್ತಿ ಹೊಂದಿ ಅವುಗಳನ್ನು ಕೊಂಡೊಯ್ಯುತ್ತಿದ್ದ ಕಾಲವೂ ಇತ್ತು, ಅದೇ ರೀತಿ ಉಪ್ಪಿನಕಾಯಿಗೆ ಪಿಂಗಾಣಿ ಭರಣಿಗಳು ಅತ್ಯಪಯುಕ್ತವಾಗಿದ್ದವು, ವರ್ಷಗಟ್ಟಲೆ ಉಪ್ಪಿನಕಾಯಿ ಹಾಳಾಗದೆ ಉಳಿಯುತ್ತಿತ್ತು, ಕೇಂದ್ರದ ಸಚಿವರಾದ ಸ್ಮøತಿ ಇರಾನಿಯವರು ಕೈ ಮಗ್ಗದ ಸೀರೆಗಳನ್ನು ಇಲ್ಲಿಂದ ಕೊಂಡೊಯ್ಯುತ್ತಿದ್ದರು, ಕೈ ಮಗ್ಗದ ಸೀರೆಗಳನ್ನು ಖರೀದಿಸುವ ಮೂಲಕ ಅದನ್ನು ನೆಯುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕರಕುಶಲ ಮೇಳಗಳನ್ನು ಆಯೋಜಿಸುವ ಸರ್ಕಾರ ಹಂತಹಂತವಗಿ ಕುಶಲಕರ್ಮಿಗಳಿಗೆ ಉತ್ತೇಜನ ನೀಡುತ್ತಿದೆ, ಆ ವಸ್ತುಗಳು ನಮ್ಮ ಸಂಪ್ರದಾಯ-ಆಸ್ತಿ ಎನ್ನಬಹುದಾಗಿದೆ, ಅವುಗಳ ಉತ್ಪಾದನೆಯಲ್ಲಿ ತೊಡಗಿರುವವರ ಶ್ರಮ ಹಾಗೂ ಕೌಶಲ್ಯತೆಯನ್ನು ಈ ಮೂಲಕ ಗುರುತಿಸಲಾಗುತ್ತಿದೆ, ಈ ರೀತಿಯ ಮೇಳಗಳು ಮತ್ತಷ್ಟು ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮದ ನಿಯಮಿತ (ಕಿಯೋನಿಕ್ಸ್)ದ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಅವರು ಮಾತನಾಡಿದರು.
ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ವೆಂಕಟೇಶ್ ಜಿ., ಕೇಂದ್ರ ಸರ್ಕಾರದ ಕರಕುಶಲ ಹಿರಿಯ ಸಹಾಯಕ ನಿರ್ದೇಶಕ ಎಸ್.ಆರ್. ಮಸ್ರಮ್, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಬಾಬು ದೇವಾಡಿಗ, ನಿತಿನ್, ಡಾ. ಸೂರ್ಯಪ್ರಕಾಶ್ ಶೆಟ್ಟಿ, ರಾಮಕೃಷ್ಣ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.