ಬ್ರಹ್ಮಾವರ, ಮಾ 07 (DaijiworldNews/HR): ಇತ್ತೀಚೆಗೆ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆಗಾಗಿ ಶೋಧ ನಡೆಸುತ್ತಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಹಮ್ಮದ್ ಶರೀಪ್ ಯಾನೆ ಸ್ಕೊರ್ಪಿಯೊ ಶರೀಪ್(34 ), ಮುಜಾಹೀದ್ ರೆಹಮಾನ್ ಯಾನೆ ಸಲ್ಮಾನ್(22), ಅಬ್ದುಲ್ ಮಜೀದ್ ಯಾನೆ ಮಜ್ಜಿಮಜ್ಜಿ(22), ಸಯ್ಯದ್ ಅಕ್ರಮ್ ಯಾನೆ ಅಕ್ಕು ಸಯ್ಯದ್(22) ಎಂದು ಗುರುತಿಸಲಾಗಿದೆ.
ಬ್ರಹ್ಮಾವರ ಠಾಣಾ ಪೊಲೀಸರು ಎಂದಿನಂತೆ ವಿಶೇಷ ಗಸ್ತಿನ್ನಲ್ಲಿದ್ದಾಗ ಬೆಳಿಗ್ಗಿನ ಜಾವ ಒಂದು ಬಿಳಿ ಬಣ್ಣದ ಸ್ಕೂಟಿಯಲ್ಲಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬಾರ್ಕೂರು ರಸ್ತೆಯಿಂದ ಪ್ರಣವ್ ಆಸ್ಪತ್ರೆಗೆ ಹೋಗುವ ಒಳ ರಸ್ತೆಗೆ ಹೋಗಲು ಅನುಮಾನಸ್ಪದವಾಗಿ ನಿಂತಿದ್ದ ಒಂದು ಸ್ಕೂಟಿ ಹಾಗೂ ಒಳ ರಸ್ತೆಯಲ್ಲಿದ್ದ ಕಾರನ್ನು ಪರಿಶೀಲಿಸುವಾಗ 4 ಜನ ಆರೋಪಿತರು ತಲವಾರ್ ನೊಂದಿಗೆ ಸೀಟ್ ಇಲ್ಲದ ಕಾರಿನ್ನಲ್ಲಿದ್ದು ವಿಚಾರಿಸಲಾಗಿ ದನ ಕಳ್ಳತನಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇನ್ನು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿದ ಸ್ಕೂಟಿ, ಬಿಳಿ ಸ್ವಿಫ್ಟ್ ಕಾರು, 4 ತಲವಾರು, 2 ಹಗ್ಗಗಳು, ನೀಲಿ ಬಣ್ಣದ ಟರ್ಪಾಲ್ನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರು 3,20,000 ಆಗಬಹುದು.
ಆರೋಪಿಗಳು 'ಟೀಂ ಗರುಡಾ' ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ತೆಗೆದುಕೊಂಡಿದ್ದು, ಪರಸ್ಪರ ಸಂಪರ್ಕಕ್ಕಾಗಿ ಇದೇ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದುದಾಗಿ ತನಿಖೆಯಿಂದ ಕಂಡು ಬಂದಿದೆ.