ಮಂಗಳೂರು, ಮಾ 14 (DaijiworldNews/MS): ರಾಷ್ಟ್ರೀಯ ಲೋಕ ಅದಾಲತ್ ಅನ್ನು ಜಿಲ್ಲೆ ಹಾಗೂ ತಾಲೂಕುಗಳ ನ್ಯಾಯಾಲಯಗಳಲ್ಲಿ ಮಾ.12ರ ಶನಿವಾರ ಹಮ್ಮಿಕೊಂಡಿದ್ದು, ವ್ಯಾಜ್ಯ ಪೂರ್ವ ಹಾಗೂ ಬಾಕಿ ಪ್ರಕರಣಗಳ ಇತ್ಯರ್ಥ ಪಡಿಸಲಾಯಿತು.
ಅದಾಲತ್ನಲ್ಲಿ ಒಟ್ಟು 11,648 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 3,150 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟು 15,21,64,098 ರೂ.ಗಳನ್ನು ಸಂಬಂಧಿಸಿದವರಿಗೆ ಪರಿಹಾರ ನೀಡಲಾಗಿದೆ.
893 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 136 ಪ್ರಕರಣಗಳನ್ನು 1,15,14,013 ರೂ.ಗಳಿಗೆ ಇತ್ಯರ್ಥ ಪಡಿಸಲಾಯಿತು. ಬಾಕಿ ಇತ್ಯರ್ಥ ಪ್ರಕರಣಗಲ್ಲಿ 10,755 ಪ್ರಕರಣಗಳಲ್ಲಿ 3,014 ಇತ್ಯರ್ಥಗೊಂಡಿವೆ. 14,06,50,085 ರೂ.ಗಳ ಪರಿಹಾರ ಮೊತ್ತ ಪಾವತಿಯಾಗಿದೆ, ಒಟ್ಟು 44 ಬೆಂಚ್ಗಳಲ್ಲಿ ಲೋಕ್ ಅದಾಲತ್ ಪ್ರಕರಣಗಳನ್ನು ಕೈಗೊಳ್ಳಲಾಗಿತ್ತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಪ್ರಕರಣಗಳ ಪೈಕಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವುದು ಮತ್ತು ಇತರೆ ಕಾರಣಗಳಿಂದ ಕೆ.ಎಸ್.ಆರ್.ಟಿ.ಸಿ ನಿಗಮದ ಪ್ರಕರಣಗಳ ಪೈಕಿ ಮಂಗಳೂರಿನ 32 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಮರು ನೇಮಕಗೊಳಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.