ಮಂಗಳೂರು, ಮಾ. 13(DaijiworldNews/SM): ನಗರ ಹೊರ ವಲಯದ ಗುರುಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಪವಾಡ ಸದೃಶ್ಯ ಪಾರಾದ ಘಟನೆ ನಡೆದಿದೆ. ಗುರುಪುರ ನಿವಾಸಿ ಮನೀಶ್ ಗಾಯಾಳು ಯುವಕ.
ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಟ್ಯಾಂಕರ್ ಅಡಿಗೆ ಸಿಲುಕಿಕೊಂಡಿದ್ದ. ಸುಮಾರು ಒಂದೂವರೆ ತಾಸು ಸಿಲುಕಿದ್ದ ಸವಾರನನ್ನು ಕಾರ್ಯಾಚರಣೆ ನಡೆಸಿ ಟ್ಯಾಂಕರ್ ಆಡಿಯಿಂದ ಮೇಲೆತ್ತಲಾಗಿದೆ. ಬೈಕ್ ಸವಾರ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ.
ಗುರುಪುರದ ಬಂಡಸಾಲೆ ಎಂಬಲ್ಲಿ ಘಟನೆ ನಡೆದಿದ್ದು, ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.