ಕುಂದಾಪುರ, ಮಾ 13 (DaijiworldNews/HR): ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿಯಲ್ಲಿ ಭಾನುವಾರ ನಡೆದಿದೆ.
ಸ್ಕೂಟಿಯಲ್ಲಿದ್ದ ಅರೆಹೊಳೆ ಎರುಕೋಣೆ ಸಮೀಪಸ ರಾಗಿಹಕ್ಲು ನಿವಾಸಿ ಜ್ಯೋತಿ(35) ಮೃತರು. ಇವರ ಪತಿ ಶರತ್ ಹಾಗೂ ಮಗು ಇಬ್ಬರೂ ಗಾಯಗೊಂಡಿದ್ದಾರೆ.
ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಮಣ್ಣು ಸಾಗಾಟದ ಟಿಪ್ಪರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದಿದ್ದು ಅದೇ ದಾರಿಯಲ್ಲಿ ಜತೆಯಾಗಿ ಹೋಗುತ್ತಿದ್ದ ಸ್ಕೂಟಿಗೆ ಢಿಕ್ಕಿಯಾಗಿದೆ. ಪರಿಣಾಮ ಜತೆಗೆ ಬೀಳುತ್ತಿದ್ದ ಮಗುವನ್ನು ಇನ್ನೊಂದು ಮಗ್ಗುಲಿಗೆ ತಪ್ಪಿಸಿದ ಮಹಿಳೆ ಬೊಬ್ಬೆ ಹೊಡೆದರೂ ಕೇಳಿಸದೆ ಆಕೆಯ ಮೇಲೆ ಟಿಪ್ಪರ್ ಹರಿದಿದೆ. ಮಗು ಹಾಗೂ ಆಕೆಯ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ದಂಪತಿ ಕುಂದಾಪುರದಲ್ಲಿ ವೃದ್ಧಾಶ್ರಮ ಒಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.