ಕುಂದಾಪುರ, ಮಾ. 12 (DaijiworldNews/SM): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2, ಬಗ್ವಾಡಿ ಇಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ವಿನೂತನ ಮಾದರಿ ಸ್ಮಾರ್ಟ್ ತರಗತಿ ಉದ್ಘಾಟನಾ ಸಮಾರಂಭ ಮಾ.12ರ ಶನಿವಾರ ನಡೆಯಿತು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಒದಗಿಸುವ ಕೊಡುವ ಕಾರ್ಯ ಆಗುತ್ತಿದೆ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ದೇಶ ಬದಲಾಗಲು ಸಾಧ್ಯ. ಕಷ್ಟದಿಂದ ಓದಿದ ವಿದ್ಯಾರ್ಥಿಗಳು ಭವಿಷ್ಯತ್ತಿನ ಉನ್ನತ ಸ್ಥಾನಕೆರುತ್ತಾರೆ. ಶಿಕ್ಷಣದಿಂದ ಯಾವ ಮಗುವೂ ಕೂಡಾ ವಂಚಿತವಾಗಬಾರದು ಎಂದರು.
ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಗ್ರಾಮೀಣ ರಸ್ತೆಯಲ್ಲಿ ಓಡಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಳ್ಳಿಹಳ್ಳಿಗಳಲ್ಲಿ ಬೇಡಿಕೆ ಇರುವ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಕೇವಲ ಲಾಭವನ್ನೇ ಗಮನದಲ್ಲಿ ಇರಿಸಿಕೊಳ್ಳದೇ ಸೇವೆಯ ಮನೋಭಾವ ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಯನ್ನು ಪರಿಗಣಿಸಿ ಬಸ್ ಓಡಿಸುವಂತಾಗಬೇಕು. ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಓಡಿಸದೇ ಇದ್ದರೆ ವಿದ್ಯಾರ್ಥಿಗಳು ಕುಂದಾಪುರದ ಡಿಪೋಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಗುಡುಗಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹಕ್ಲಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚೇತನ್ ಕುಮಾರ್, ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗ ಮುಖ್ಯಸ್ಥ ಕಮಲ್ ಕುಮಾರ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಮ್.ಮುಂದಿನಮನಿ, ಹಕ್ಲಾಡಿ ಗ್ರಾ. ಪಂ ಸದಸ್ಯ ಅಶೋಕ ಪೂಜಾರಿ, ಶಾರದಾ ಮೊಗವೀರ, ಭಾರತ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಬಿ.ಎನ್.ಶೆಟ್ಟಿ, ಪುರೋಹಿತರಾದ ನಾಗಪ್ಪಯ್ಯ ಭಟ್ ಬೈಲೂರು, ಕೆ.ಎಸ್.ಆರ್.ಟಿ.ಸಿ ಡಿಪೋ ಮೆನೇಜರ್ ರಾಜೇಶ, ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಮ್, ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಉದ್ಯಮಿ ಕೆ.ಅಬ್ದುಲ್ ರೆಹಮಾನ್, ಅಜಿತ್ ಕುಮಾರ್ ಬಗ್ವಾಡಿ, ಬಗ್ವಾಡಿ ಮಹಿಷಾಸುರಮರ್ದಿನಿ ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಪುತ್ರನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ರಾಜೀವ ಶೆಟ್ಟಿ, ವಿದ್ಯಾರ್ಥಿ ನಾಯಕಿ ಪ್ರಜ್ಞಾ ಉಪಸ್ಥಿತರಿದ್ದರು.