ಮಂಗಳೂರು, ಮಾ. 12 (DaijiworldNews/SM): ಯು.ಟಿ. ಖಾದರ್ ಅತ್ಯಂತ ಭ್ರಷ್ಟ ರಾಜಕಾರಣಿ ಎಂಬುವುದಾಗಿ ಅವರ ಜೊತೆ ಕಳೆದ 25 ವರ್ಷಗಳಿಂದ ಜೊತೆಯಲ್ಲಿದ್ದ ಆಪ್ತ ಸಂತೋಷ್ ಶೆಟ್ಟಿ ಆರೋಪಿಸಿದ್ದಾರೆ. ಹಾಗೂ ಬಿಜೆಪಿ ಸೇರ್ಪಡೆಗೆ ಸಿದ್ದರಾಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾದರ್ ಅವರ ನಡವಳಿಕೆಯಿಂದ ನಾವು ಬೇಸತ್ತಿದ್ದೇವೆ. ಈ ಕಾರಣದಿಂದಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ. ಹಲವು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದಾರೆ.
ಉಳ್ಳಾಲ(ಮಂಗಳೂರು) ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅಲ್ಪ ಸ್ವಲ್ಪ ಅನುದಾನದ ಕಾಮಗಾರಿ ಮಾಡಿ ಫೋಸ್ ನೀಡಿದ್ದಾರೆ. ಅವರಿಗೆ ದೇಶದಾದ್ಯಂತ ಮನೆಯಿದೆ, ಆದರೆ ಬಡವರಿಗೆ ಮನೆಯಿಲ್ಲ. ಅಬ್ಬಕ್ಕ ನಾಡು ಎಂದು ಹೇಳುವ ಇವರು ಉಳ್ಳಾಲದಲ್ಲಿ ಒಂದು ಮಹಿಳಾ ಕಾಲೇಜು ಮಾಡಿಲ್ಲ. ಮದುವೆ ಮುಂಜಿ, ಮಕ್ಕಳ ತೊಟ್ಟಿಲು ಹಾಕುವ ಕಾರ್ಯದಲ್ಲಿ ಭಾಗಿಯಾಗಿ ಸಮಯ ಕಳೆಯುತ್ತಿದ್ದಾರೆ ಎಂಬುವುದಾಗಿ ಖಾದರ್ ವಿರುದ್ಧ ಸಂತೋಷ್ ಶೆಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.