ಬಂಟ್ವಾಳ, ಮಾ. 12 (DaijiworldNews/SM): ಜಿಲ್ಲೆಯಲ್ಲಿನ ಟೋಲ್ ಗೇಟ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳವಾರ ರಾಜ್ಯ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ನಲ್ಲಿ ಇರ್ಕಾನ್ ಕಂಪೆನಿ ಟೋಲ್ ಗೇಟ್ ನಿರ್ವಹಿಸುತ್ತಿದ್ದು, ತಲಪಾಡಿ ಹಾಗೂ ಹೆಜಮಾಡಿಯಲ್ಲಿ ನವಯುಗ ಕಂಪೆನಿ ಟೋಲ್ ನಿರ್ವಹಿಸುತ್ತಿದೆ. ಹತ್ತಿರ ಹತ್ತಿರ ನಿರ್ಮಾಣವಾಗಿರುವ ಬಗ್ಗೆ ಆಕ್ಷೇಪಬಂದಿದೆ. ಆದರೆ ಹಲವಾರು ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಈ ಕುರಿತು ಚರ್ಚಿಸಿ ಕಾನೂನಿನ ತೊಡಕುಪರಿಹರಿಸಲು ಸಭೆ ಕರೆಯಲಾಗಿದ್ದು, ರಾಜ್ಯಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಇನ್ನು ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ತೆರವುಗೊಳಿಸುವ ಬಗ್ಗೆ ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆ ಸಭೆಯಲ್ಲಿ ಚರ್ಚಿಸಲು ಸಂಸದರು ನಿರ್ಧರಿಸಿದ್ದಾರೆ.