ಕುಂದಾಪುರ, ಮಾ 11 (DaijiworldNews/DB): ಬಗ್ವಾಡಿಯ ನೂಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ನಲ್ಲಿ ವಿನೂತನ ಮಾದರಿ ಸ್ಮಾರ್ಟ್ ತರಗತಿ ಉದ್ಘಾಟನೆ ಮಾ.12ರ ಶನಿವಾರ ನಡೆಯಿತು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಆಗುತ್ತಿದೆ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ದೇಶ ಬದಲಾಗಲು ಸಾಧ್ಯ. ಕಷ್ಟದಿಂದ ಓದಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ. ಶಿಕ್ಷಣದಿಂದ ಯಾವ ಮಗುವೂ ಕೂಡಾ ವಂಚಿತವಾಗಬಾರದು ಎಂದರು.
ಕೆಎಸ್ಸಾರ್ಟಿಸಿ ಬಸ್ಗಳನ್ನು ಗ್ರಾಮೀಣ ರಸ್ತೆಯಲ್ಲಿ ಓಡಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಳ್ಳಿ ಹಳ್ಳಿಗಳಲ್ಲಿ ಬೇಡಿಕೆ ಇರುವ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಕೇವಲ ಲಾಭವನ್ನೇ ಗಮನದಲ್ಲಿ ಇರಿಸಿಕೊಳ್ಳದೇ ಸೇವಾ ಮನೋಭಾವ, ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಯನ್ನು ಪರಿಗಣಿಸಿ ಬಸ್ ಓಡಿಸುವಂತಾಗಬೇಕು. ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಓಡಿಸದೇ ಇದ್ದರೆ ವಿದ್ಯಾರ್ಥಿಗಳು ಕುಂದಾಪುರದ ಡಿಪೋಗೆ ಮುತ್ತಿಗೆ ಹಾಕಲಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚೇತನ್ ಕುಮಾರ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಮುಖ್ಯಸ್ಥ ಕಮಲ್ ಕುಮಾರ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಹಕ್ಲಾಡಿ ಗ್ರಾ. ಪಂ ಸದಸ್ಯ ಅಶೋಕ ಪೂಜಾರಿ, ಶಾರದಾ ಮೊಗವೀರ, ಭಾರತ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಬಿ.ಎನ್. ಶೆಟ್ಟಿ, ಪುರೋಹಿತರಾದ ನಾಗಪ್ಪಯ್ಯ ಭಟ್ ಬೈಲೂರು, ಕೆಎಸ್ಸಾರ್ಟಿಸಿ ಡಿಪೋ ಮೆನೇಜರ್ ರಾಜೇಶ, ಎಸ ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಮ್, ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಉದ್ಯಮಿ ಕೆ. ಅಬ್ದುಲ್ ರೆಹಮಾನ್, ಅಜಿತ್ ಕುಮಾರ್ ಬಗ್ವಾಡಿ, ಬಗ್ವಾಡಿ ಮಹಿಷಾಸುರಮರ್ದಿನಿ ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ ಪುತ್ರನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ. ರಾಜೀವ ಶೆಟ್ಟಿ, ವಿದ್ಯಾರ್ಥಿ ನಾಯಕಿ ಪ್ರಜ್ಞಾ ಉಪಸ್ಥಿತರಿದ್ದರು.
ಮಿನಿಯೇಚರ್ ಬಸ್ ನಿರ್ಮಾತೃ ಪ್ರಶಾಂತ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಜಾ ವಿ. ಶೆಟ್ಟಿ ಸ್ವಾಗತಿಸಿದರು. ವಸಂತರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.