ಮಂಗಳೂರು, ಮಾ. 08 (DaijiworldNews/SM): ಮಹಿಳೆಗೆ ದೇವತೆಯ ಸ್ಥಾನ ನೀಡಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ, ಹೆಣ್ಣನ್ನು ಮಾತೃ ಸ್ವರೂಪಿಯಾಗಿ ಕಾಣುವ ಈ ದೇಶದಲ್ಲಿ ಅವಳಿಗೆ ಸ್ವಾತಂತ್ರ್ಯದೊಂದಿಗೆ ಸಮಾನತೆಗೂ ಹೆಚ್ಚಿನ ಗೌರವವನ್ನು ನೀಡಲಾಗಿದೆ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯಪಟ್ಟರು.
ಅವರು ಮಾ.8ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣಕ್ಕೆ ದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆ ಮೂಲಕ ಉತ್ತಮ ಸಮಾಜ ಹಾಗೂ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದಲ್ಲಿ ಹಕ್ಕಿಗಾಗಿ ಹೋರಾಟ ಮಾಡಲಿಲ್ಲ, ಬದಲಿಗೆ ರಾಷ್ಟ್ರ ಗೌರವವನ್ನು ಕಾಪಾಡಲು ಶಸ್ತ್ರ ಹಿಡಿದ ಮಹಿಳೆಯರಿದ್ದಾರೆ, ಝಾನ್ಸಿ ರಾಣಿ ಲಕ್ಷ್ಮೀಭಾಯಿ ಒಂದು ರೀತಿಯಲ್ಲಿ ದೇಶ ಸೇವೆ ಮಾಡಿದರೆ, ಅಕ್ಕ ಮಹಾದೇವಿಯಂತಹ ಸಂತರು ಮತ್ತೊಂದು ರೀತಿಯಲ್ಲಿ ಸೇವೆ ಮಾಡಿ ಈ ರಾಷ್ಟ್ರದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.