ಕಾರ್ಕಳ, ಮಾ 08 (DaijiworldNews/HR): ಮಾರ್ಚ್ 10ರಿಂದ 20ರ ತನಕ ಜರಗಲಿರುವ ಕಾರ್ಕಳ ಉತ್ಸವಕ್ಕೆ ಊರ-ಪರವೂರುಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, ಸ್ವಚ್ಚತೆಯಲ್ಲಿ ಯಾವುದೇ ರೀತಿಯಲ್ಲಿ ಕುಂದುಕೊರತೆ ಕಾಣಿಸಿಕೊಳ್ಳಬಾರದು. ಕರ್ತವ್ಯದಲ್ಲಿ ಪ್ರಾಮಾಣಿಕತೆ ನಿಷ್ಠೆಯು ಸದಾ ಮುಂದುವರಿಯಲಿ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ಕುಮಾರ್ ಹೇಳಿದರು.
ವಿಕಾಸ ಸೇವಾ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ ಕಾರ್ಕಳ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಕಾರ್ಕಳ ಪುರಸಭಾ ವ್ಯಾಪ್ತಿಯ ಪೌರಕಾರ್ಮಿಕರ ಸೇವಾ ಮನೋಭಾವವು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಅದೇ ಕಾರಣದಿಂದಾಗಿ ಕಾರ್ಕಳ ಪುರಸಭೆಗೆ ಪ್ರಶಸ್ತಿಗಳು ಲಭಿಸಿದೆ. ಇದನ್ನು ಸಾಭೀತು ಪಡಿಸುವ ಹೊಣೆಗಾರಿಕೆ ನಿಮ್ಮದಾಗಿರಲಿ ಎಂದ ಸಚಿವರು ಹಿರಿಯ ಪೌರ ಕಾರ್ಮಿಕರ ಮಾಹಿತಿಯನ್ನು ಪಡೆದರು.
ಟಿಪ್ಸ್ ಸಂಸ್ಥೆಯ ದಿವ್ಯ ಹೆಗ್ಡೆ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿಯಲ್ಲಿ ಮಾತ್ರವೇ ನಮ್ಮ ಸಂಸ್ಥೆ ಕಾರ್ಯಚರಿಸುತ್ತಿದ್ದು, ಮುಮದಿನ ದಿನಗಳಲ್ಲಿ ಪುರಸಭೆಯ ಪೌರಕಾರ್ಮಿಕರ ಸಹಕಾರವು ಅತ್ಯಗತ್ಯವಾಗಿದೆ. ನಗರ ವ್ಯಾಪ್ತಿಯಲ್ಲಿ ಸ್ವಚ್ಚತೆಯ ಕುರಿತು ಜನಜಾಗೃತಿಗೆ ಸ್ವಂದಿಸದಿದ್ದಾಗ ದಂಡ ಪ್ರಯೋಗ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮಾತನಾಡಿ, ನಮ್ಮಲ್ಲರೂ ಜೊತೆಯಾಗಿ ಕರ್ತವ್ಯ ನಿಷ್ಠೆ ತೋರಿದಾಗ ಉತ್ಸವ ಯಶಸ್ಸುಗೊಳಿಸಲು ಸುಗಮವಾಗುತ್ತದೆ. ಒಟ್ಟು 38 ಮಂದಿ ಪೌರಕಾರ್ಮಿಕರು ಇದ್ದು ಅವರಲ್ಲಿ 20 ಮಂದಿ ಖಾಯಂ, 18 ಮಂದಿ ಹೊರಗುತ್ತಿಗೆಯಡಿಯಲ್ಲಿ ದುಡಿಯುತ್ತಿದ್ದಾರೆ. ಕಾರ್ಕಳ ಉತ್ಸವದ ಪ್ರಯುಕ್ತ 25 ಮಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದರು.
ಪುರಸಭಾ ಸದಸ್ಯ ಸೋಮನಾಥ ನಾಯಕ್, ಮಿಯ್ಯಾರಿನ ಪ್ರಕಾಶ್ ಬಲಿಪ ಉಪಸ್ಥಿತರಿದ್ದರು.