Karavali
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ
- Tue, Mar 08 2022 02:33:48 PM
-
ಮಂಗಳೂರು, ಮಾ 08 (DaijiworldNews/DB): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಸಮಾರಂಭ ಮಾರ್ಚ್ 27ರಂದು ಕುಮಟಾದ ಮಹಾಲಸಾ ನಾರಾಯಣಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ನಾಗೇಶ್ ಅಣ್ವೇಕರ್, ದಿನೇಶ್ ಪ್ರಭು ಕಲ್ಲೊಟ್ಟೆ, ಮಾಧವ ಖಾರ್ವಿ
ಫಾ| ಜೊವಿನ್ ವಿಶ್ವಾಸ್ ಸಿಕ್ವೇರಾ
ಎಚ್ಚೆಮ್ ಪೆರ್ನಾಲ್
ವಾಜ್ಜಿತಾಲೊ ಮ್ಹಾಂತಾರೊಪುಸ್ತಕ ಪುರಸ್ಕಾರಕ್ಕೆ ಲಾರಾಚೆಂ ಗೀತ್, ಲವ್ ಲೆಟರ್ಸ್ ಮತ್ತು ರುಪಾಂ ಆನಿ ರೂಪಕಾಂ ಪುಸ್ತಕಗಳು ಹಾಗೂ ಗೌರವ ಪುರಸ್ಕಾರಕ್ಕೆ ನಾಗೇಶ್ ಅಣ್ವೇಕರ್, ದಿನೇಶ್ ಪ್ರಭು ಕಲ್ಲೊಟ್ಟೆ ಹಾಗೂ ಮಾಧವ ಖಾರ್ವಿ ಆಯ್ಕೆಯಾಗಿದ್ದಾರೆ.
ಕೊಂಕಣಿ ಸಾಹಿತ್ಯ -ನಾಗೇಶ್ ಅಣ್ವೇಕರ್
ಯಲ್ಲಾಪುರ ತಾಲೂಕಿನ ತುಂಬೆಬೀಡುವಿನಲ್ಲಿ ಮಹಾಬಲೇಶ್ವರ ಅಣ್ವೇಕರ್ ಅವರ ಪುತ್ರನಾಗಿ 1961 1 ಫೆ. 11ರಂದು ಜನಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುವ ಇವರು ಕೊಂಕಣಿ ದೈವಜ್ಞ ಬ್ರಾಹ್ಮಣ ಸಮಾಜದವರಾಗಿದ್ದು ವೃತ್ತಿಯಲ್ಲಿ ಸ್ವರ್ಣಾಭರಣ ತಯಾರಿಕೆ ಮಾಡುತ್ತಿದ್ದಾರೆ. ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ರಚನೆ, ಜನಪದ, ಸಾಹಿತ್ಯ ಸಂಗ್ರಹ ಮತ್ತು ಛಂದೋಬದ್ದ ಸಾಹಿತ್ಯ ರಚನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಯಕ್ಷಗಾನದ ಹಲವಾರು ಪ್ರಸಂಗಗಳನ್ನು ಕೊಂಕಣಿ ಭಾಷೆಗೆ ತರ್ಜುಮೆಗೊಳಿಸಿ ತಾಳಮದ್ದಳೆ ನಡೆಸಿದ್ದಾರೆ. ಗಮಕ ಕಲೆಯಲ್ಲಿ ಕೊಂಕಣಿ ಭಾಷಾ ಸಾಹಿತ್ಯದ ಕೆಲಸ ಮಾಡಿದ್ಧಾರೆ. ಹಲವಾರು ರೇಡಿಯೋ ಕಾರ್ಯಕ್ರಮಗಳಲ್ಲಿ ಕೊಂಕಣಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಕೊಂಕಣಿ ಭಾಷಾ ತಜ್ಞರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಸಾಹಿತ್ಯ, ಇತಿಹಾಸ, ಕಾವ್ಯಶಾಸ್ತ್ರದ ಕುರಿತು ಚರ್ಚಿಸಿ ಕೊಂಕಣಿ ಸಾಹಿತ್ಯದ ಬಗ್ಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೊಂಕಣಿ ಕಾವ್ಯ ಮಂಜರಿ, ಕೊಂಕಣಿ ಕಾವ್ಯ ಪ್ರಭಾ, ಕೊಂಕಣಿ ಶ್ರೀ ದೈವಜ್ಞ ಪೀಠ, ಪುಲಾಕಳೊ, ಸುಭಾಷಿತಾಚೆ ತತ್ವಾದರ್ಶ ಕೃತಿಗಳು ಪ್ರಕಟಗೊಂಡಿವೆ.
ಕೊಂಕಣಿ ಕಲೆ – ದಿನೇಶ್ ಪ್ರಭು ಕಲ್ಲೊಟ್ಟೆ
ರವೀಂದ್ರ ಪ್ರಭು ಹಾಗೂ ಶ್ರೀಮತಿ ಲೀಲಾವತಿ ಅವರ ಪುತ್ರರಾಗಿ 1971ರ ನ. 1ರಂದು ಕಾರ್ಕಳದಲ್ಲಿ ಜನಿಸಿದರು. ವೃತ್ತಿಯಲ್ಲಿ ಹಿರಿಯಂಗಡಿ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 30 ವರ್ಷಗಳಿಂದ ಕೊಂಕಣಿ ನಾಟಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ. ವಕ್ಕಲ್, ಅಮ್ಮಿ ಸೋಣಾತಿ, ಮಕ್ಕ್ ಗೊತ್ತಸ್ಸ್, ಹಶಿಂ ಜಾಲ್ಯಾರಿ ಕಶಿಂ, ಪೂರ ತುಮ್ಗೆಲೆ ಕತೀರ್, ಗಿರ್ಮಿಟ್ ಗಿರಿಧರು, ಮಂಕಡ್ ಕೊರ್ನುಕಾತಿ, ಗಂಗ್ ಮಾಯ್ಯೆಲೆ ಗಮ್ಮತ್, ವ್ಹರಣ್ ಇವರು ರಚಿಸಿರುವ ಕೊಂಕಣಿ ನಾಟಕಗಳು. "ಪಲ್ಲವಿ ಆರ್ಟ್ಸ್" ಸಂಸ್ಥೆಯನ್ನು ಕಟ್ಟಿಕೊಂಡು
15 ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳ ನಾಟಕ ಕಲಾವಿದರಿಗೆ, ಶಾಲಾ ಮಕ್ಕಳಿಗೆ ಪ್ರಸಾದನ ಮಾಡಿದ್ದಾರೆ. ತಮ್ಮ ಸಂಸ್ಥೆಯ ವತಿಯಿಂದ ರಂಗ ತರಬೇತಿ ಶಿಬಿರವನ್ನು ನಡೆಸಿ ನಟನೆ, ಪ್ರಸಾದನ ಕಲಾ ತರಬೇತಿ ಆಯೋಜಿಸುತ್ತಾರೆ. ನಾಟಕ ಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ಡಾ| ಬಿ.ಆರ್. ಅಂಬೇಡ್ಕರ್ ಸಮಾಜ ಸೇವಾ ಸಂಘದಿಂದ "ಕಲಾಬ್ರಹ್ಮ" ಬಿರುದು, 2019 ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2020 ರಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ "ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ" ಹಾಗೂ 200 ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.
ಕೊಂಕಣಿ ಜಾನಪದ – ಮಾಧವ ಖಾರ್ವಿ
ಕುಂದಾಪುರದ ಕೋಡಿಬೆಂಗ್ರೆಯಲ್ಲಿ 1944ರ ಜೂ. 1ರಂದು ಜನಿಸಿದ ಇವರು1962 ರಲ್ಲಿ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ನೌಕರನಾಗಿ ಸೇವೆಗೆ ಸೇರಿ ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಕೊಂಕಣಿ ಜಾನಪದದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಹೊಂದಿರುವ ಇವರು ಕೋಡಿ ಬೆಂಗ್ರೆ ಯವಕರ ಸಂಘಟನೆಯನ್ನು ಕಟ್ಟಿಕೊಂಡು ಖಾರ್ವಿ ಜಾನಪದ ಕಲೆ ಹಾಗೂ ಖಾರ್ವಿ ಧಾರ್ಮಿಕ ಆಚರಣೆಗಳು ಕುರಿತು ಹಿರಿಯ ನುರಿತರಿಂದ ತರಬೇತಿಯನ್ನು ನಡೆಸಿ ಖಾರ್ವಿ ಜಾನಪದವನ್ನು ಉಳಿಸುವ ಕಾರ್ಯಕ್ಕೆ ಮುಂದಾದರು. ಮುಂದೆ ಕುಂದಾಪುರ, ಕಾರವಾರ, ಹಳದಿಪುರ, ಎರ್ಮಾಳ, ಬ್ರಹ್ಮಾವರ ಪರಿಸರದಲ್ಲಿ ಖಾರ್ವಿ ಸಂಘಟನೆಯನ್ನು ಕಟ್ಟಿ ಖಾರ್ವಿ ಜಾನಪದ ಕಲೆಯನ್ನು ಉಳಿಸುವ, ಬೆಳೆಸುವ ಕಾರ್ಯ ಆರಂಭಿಸಿದರು. ಖಾರ್ವಿ ಜನಾಂಗದ ಮುಂದಿನ ಪ್ರಜೆಗಳಾಗುವ ಸಣ್ಣ ಮಕ್ಕಳನ್ನು ಒಟ್ಟುಗೂಡಿಸಿ ಅವರಿಗೆ, ಗುಮಟೆ ನೃತ್ಯ, ಕೋಲಾಟ, ಹೋಳಿ ಕಥನ, ಜಾನಪದ ಗೀತ ಗಾಯನ ತರಬೇತಿಯನ್ನು ನೀಡುತ್ತಿದ್ದಾರೆ.
ಪುಸ್ತಕ ಪುರಸ್ಕಾರ-2021
ಕೊಂಕಣಿ ಕವನ - ಲಾರಾಚೆಂ ಗೀತ್
ಜೆ.ವಿ. ಸಿಕೇರ್ ಕಾವ್ಯನಾಮದಿಂದ ಬರೆಯುವ ಫಾ| ಜೊವಿನ್ ವಿಶ್ವಾಸ್ ಸಿಕ್ವೇರಾ 1993 ಎಪ್ರಿಲ್ 2 ರಂದು ಕಾರ್ಕಳದ ಬೋಳ ಗ್ರಾಮದಲ್ಲಿ ಜನಿಸಿದರು. ಇವರು ಬಿಎಸ್ಸಿ ಪದವಿ, ಕೊಂಕಣಿಯಲ್ಲಿ ಸ್ನಾತಕೋತ್ತರ ಪದವಿ, ತತ್ವಶಾಸ್ತ್ರ ಮತ್ತು ದೇವಶಾಸ್ತ್ರದಲ್ಲಿ ಶಿಕ್ಷಣ ಪಡೆದಿದ್ದಾರೆ. ಕಳೆದ 24 ವರ್ಷಗಳಿಂದ ಕೊಂಕಣಿ ಹಾಗೂ ಇತರ ಭಾಷೆಗಳ ಮಾಲಿಕೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಲೇಖನ, ಕವಿತೆ, ಕತೆಗಳು ಪ್ರಕಟಗೊಂಡಿವೆ. ಹಾಡುಗಳು ಹಾಗೂ ನಾಟಕಗಳನ್ನೂ ರಚಿಸಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತಾ ವಾಚನ ನಡೆಸಿದ್ದಾರೆ. ಹಲವಾರು ಸಾಹಿತ್ಯಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಸನ್ಮಾನ ಸ್ವೀಕರಿಸಿದ್ದು, ತಮ್ಮ ದೇವಶಾಸ್ತ್ರ ಅಧ್ಯಯನದ ಸಂದರ್ಭದಲ್ಲಿಯೇ ಕೊಂಕಣಿ ಅಕಾಡೆಮಿಯ ಕೊಂಕಣಿ ಬಿಂಗಾರಿಯ ಮುಂದಾಳತ್ವ ವಹಿಸಿದ್ದರು. ಇವರ "ಲ್ಹಾರಾಂಚೆಂ ಗೀತ್" ಕವನ ಸಂಗ್ರಹ ಪುಸ್ತಕವು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೊಂಕಣಿ ಸಣ್ಣಕತೆಗಳು – ಲವ್ಲೆಟರ್ಸ್
ವಾಜ್ಜಿತಾಲೊ ಮ್ಹಾಂತಾರೊ
ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕನ್ನಡಲ್ಲಿ ಸಣ್ಣಕತೆ ಬರೆಯುವ ಹವ್ಯಾಸ ಬೆಳೆಸಿಕೊಂಡವರು. ಕನ್ನಡದಲ್ಲಿ ಸಣ್ಣಕತೆ ಬರೆಯುತ್ತಿರುವ ಇವರ ಪ್ರಥಮ ಕಥಾ ಸಂಕಲನ 'ತಿರುವು' 1985 ರಲ್ಲಿ ಮುದ್ರಣಗೊಂಡಿತು. ಕಾದಂಬರಿ ಕ್ಷೇತ್ರದಲ್ಲೂ ತಮ್ಮ ಬರವಣಿಗೆಯನ್ನು ಮುಂದುವರಿಸಿ 'ಸ್ವಪ್ನ ಸಾರಸ್ವತ' ಮತ್ತು 'ಬ್ರಹ್ಮ' ಎಂಬ ಎರಡು ಕೃತಿಗಳು ಪ್ರಕಟಗೊಂಡಿವೆ. ಇವರ ಸ್ವಪ್ನ ಸಾರಸ್ವತ ಕೃತಿಗೆ ಹಲವಾರು ಪ್ರಶಸ್ತಿಗಳು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 16ನೇ ಶತಮಾನದಲ್ಲಿ ಪೋರ್ಚುಗೀಸರ ದಬ್ಬಾಳಿಕೆಯಿಂದ ಗೋವಾದಿಂದ ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶಗಳಲ್ಲಿ ಸಾರಸ್ವತರು ಬರುವಂತಹ ಅಪೂರ್ವ ಕಥನ ಸ್ವಪ್ನ ಸಾರಸ್ವತದಲ್ಲಿ ಮೂಡಿಬಂದಿದೆ. ಸ್ವಪ್ನ ಸಾರಸ್ವತ ಇಂಗ್ಲಿಷ್ ಮಾತ್ರವಲ್ಲದೆ ಇತರ ಭಾಷೆಗೂ ಭಾಷಾಂತರಗೊಂಡಿದೆ. "ಲವ್ಲೆಟರ್ಸ್ ವಜ್ಜಿತಾಲೊ ಮ್ಹಾಂತಾರೊ" ಇವರ ಮೊದಲ ಕೊಂಕಣಿ ಕಥಾ ಸಂಕಲವಾಗಿದೆ. ಈ ಕೃತಿಯು 2021ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.
ಕೊಂಕಣಿ ಲೇಖನ – ರುಪಾಂ ಆನಿ ರೂಪಕಾಂ
ಎಚ್ಚೆಮ್ ಪೆರ್ನಾಲ್ ಕಾವ್ಯನಾಮದಿಂದ ಸುಮಾರು 35 ವರ್ಷಗಳಿಂದ ಕೊಂಕಣಿ ಬರಹಗಾರರಾಗಿರುವ ಹೆನ್ರಿ ಇಗ್ನೇಶಿಯಸ್ ಮೆಂಡೋನ್ಸಾ ಮೂಲತಃ ಉಡುಪಿ ಜಿಲ್ಲೆಯ ಪೆರ್ನಾಲ್ ನವರಾಗಿದ್ದಾರೆ. 2018 ನೇ ಸಾಲಿನಲ್ಲಿ ಇವರ ʼಬೀಗ್ ಆನಿ ಬಿಗಾತ್ʼ ಕೃತಿಗೆ ವಿಶ್ವ ಕೊಂಕಣಿ ಕೇಂದ್ರ ಪ್ರತಿಷ್ಠಿತ ಶ್ರೀಮತಿ ವಿಮಲಾ ಪೈ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. 2019 ನೇ ಸಾಲಿನ ಕವಿತಾ ಟ್ರಸ್ಟ್ ಇವರ ಮಥಾಯಸ್ ಕುಟಾಮ್ ಕವಿತಾ ಪುರಸ್ಕಾರ ಇವರಿಗೆ ಲಭಿಸಿದೆ. ಪ್ರಸ್ತುತ ಕೊಂಕಣಿ ಜಾಲತಾಣ "ಕಿಟಾಳ್"ನ (kittall.com) ಸಂಪಾದಕರು ಹಾಗೂ "ಆರ್ಸೊ" ಕೊಂಕಣಿ ಮಾಸಪತ್ರಿಕೆಯ ಪ್ರಕಾಶಕರಾಗಿದ್ದಾರೆ. ಕಿಟಾಳ್ ಪ್ರಕಾಶ ಹೆಸರಿನಲ್ಲಿ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇವರ "ರುಪಾಂ ಆನಿ ರೂಪಕಾಂ" ಕೃತಿಯು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.
ಇಂಧನ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿರುವರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕೊಂಕಣಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಕೊಂಕಣಿ ಲಿಟ್ಫೆಸ್ಟ್ ಕಾರ್ಯಕ್ರಮವು ಮಂಗಳೂರು ಶಕ್ತಿನಗರ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದಲ್ಲಿ ಮಾ. 19ರಂದು ಜರಗಲಿದೆ.