ಉಡುಪಿ, ಮಾ 08 (DaijiworldNews/DB): ಒಂದು ಕಾಲದಲ್ಲಿ ಯಶಸ್ವಿ ಹೊಟೇಲ್ ಉದ್ಯಮಿಯಾಗಿದ್ದ ಈ ಹಿರಿಜೀವ ಪ್ರಸ್ತುತ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಸಾರ್ವಜನಿಕ ಕಾರ್ಯಕ್ರಮಗಳಲ್ಲಿನ ಅನ್ನ ಸಂತರ್ಪಣೆಗೆ ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ.
ಬೆವರು ಸುರಿಸಿ ದುಡಿದು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ ತಂದೆಯನ್ನು ಕಳೆದ 20 ವರ್ಷದ ಹಿಂದೆ ಮಕ್ಕಳೇ ಮನೆಯಿಂದ ಹೊರ ಹಾಕಿದ ಮನಕಲಕುವ ಘಟನೆಯಿದು. ಮೂಲತಃ ಉಡುಪಿ ಜಿಲ್ಲೆಯ ಸಾಸ್ತಾನದ ಶ್ರೀನಿವಾಸ ತುಂಗ, ಮಂಡ್ಯದಲ್ಲಿ ಹೊಟೇಲ್ ಉದ್ಯಮವನ್ನು ನಡೆಸಿಕೊಂಡು ತಮ್ಮ ಮೂವರು ಮಕ್ಕಳಿಗೆ ಎಂಜಿನಿಯರಿಂಗ್ ವಿದ್ಯಾಭ್ಯಾಸ ನೀಡಿದ್ದರು. ಆದರೆ ಬಳಿಕ ಮಕ್ಕಳೇ ತಂದೆಯನ್ನು ಮನೆಯಿಂದು ಹೊರ ಹಾಕಿದ್ದರು. ಹೊಟೇಲ್ ಉದ್ಯಮಿಯಾಗಿದ್ದ ಅವರು ಈ ಘಟನೆಯ ಬಳಿಕ ಕಳೆದ 18 ವರ್ಷಗಳ ಕಾಲ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿದರು. ಕೊರೊನಾ ಸಂಕಷ್ಟದ ಬಳಿಕ ತವರು ಜಿಲ್ಲೆಗೆ ಆಗಮಿಸಿ ಸಾಸ್ತಾನದಲ್ಲಿ ರೂಂನಲ್ಲಿ ವಾಸವಾಗಿದ್ದಾರೆ.
ಪ್ರತಿದಿನ ಊಟಕ್ಕೆ ಪರದಾಡುತ್ತಿರುವ ಅವರು, ಭೂತಕೋಲ, ರಥೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳಿಗೆ ಅಲೆದಾಡುತ್ತಿದ್ದಾರೆ.
ಈ ನಡುವೆ 2019ರ ಸೆಪ್ಟೆಂಬರ್ ನಲ್ಲಿ ಕುಂದಾಪುರದಲ್ಲಿನ ಹಿರಿಯ ನಾಗರಿಕರ ನ್ಯಾಯಮಂಡಳಿಯ ಅಧ್ಯಕ್ಷ್ಯರಾದ ಸಹಾಯಕ ಆಯುಕ್ತರಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದರಾದರೂ, 29 ತಿಂಗಳು ಕಳೆದರೂ ವಿಚಾರಣೆ ಇನ್ನೂ ಮುಗಿದಿಲ್ಲ. ಮಕ್ಕಳೂ ವಿಚಾರಣೆಗೆ ಹಾಜರಾಗಿಲ್ಲ. ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನದ ಅಧ್ಯಕ್ಷ ಡಾ. ರವಿಂದ್ರನಾಥ್ ಶಾನೋಭಾಗ್ ಅವರಲ್ಲಿ ಶ್ರೀನಿವಾಸ್ ತಮ್ಮ ಸಂಕಷ್ಟ ತೋಡಿಕೊಂಡಿದ್ದು, ಪ್ರತಿಷ್ಟಾನವು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ನಿರ್ಧರಿಸಿದೆ.
ಮತ್ತೆ ಮನೆಯೊಳಗೆ ಸೇರಿಸಿಕೊಳ್ಳದಿದ್ದರೂ ಪರವಾಗಿಲ್ಲ, ಆದರೆ ಬದುಕಲು ನನಗೆ ಜೀವನಾಂಶ ನೀಡಬೇಕು ಎಂಬುದು ತುಂಗ ಅವರ ಆಗ್ರಹ.