ಕಾರ್ಕಳ, ಮಾ. 07 (DaijiworldNews/SM): ಅನಾರೋಗ್ಯದಿಂದ ಬಳಲುತ್ತಿದ್ದ ಕುಟುಂಬವೊಂದಕ್ಕೆ ಸೇರಿದ ಮನೆಯೊಂದನ್ನು ಧ್ವಂಸಗೈದು,ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಹಾಗೂ ಮನೆಸಾಮಾಗ್ರಿಗಳನ್ನು ಕಳವುಗೈದ ಘಟನೆ ಈದು ಗ್ರಾಮದ ಬಾರೆ ಎಂಬಲ್ಲಿ ನಡೆದಿದೆ.
ಬಾರೆ ನಿವಾಸಿ ನಿತ್ಯಾನಂದ ಅವರ ಪತ್ನಿ ಶಕುಂತಳ ಶೆಟ್ಟಿ(46) ದೂರುದಾರರು. ಈದು ಗ್ರಾಮದ ಸರಕಾರಿ ಕುಮ್ಕಿ ಸ್ಥಳವಾದ ಸರ್ವೆ ನಂಬ್ರ 167 ರಲ್ಲಿ 1ರ ಸ್ಥಳದಲ್ಲಿ ಸುಮಾರು 5 ಲಕ್ಷದಷ್ಠು ಖರ್ಚು ಮಾಡಿ ವಾಸದ ಮನೆ ಕಟ್ಟಿ ಸಂಸಾರದೊಂದಿಗೆ ವಾಸ ಮಾಡಿಕೊಂಡಿದ್ದರು. ಅನಾರೋಗ್ಯದ ನಿಮಿತ್ತ ತನ್ನ ಮಗಳ ಮನೆಯಲ್ಲಿದ್ದಾಗ ಫೆಬ್ರವರಿ ರಾತ್ರಿ 10.30ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯ ನಡುವೆ ಸಮಾನ ಉದ್ದೇಶದಿಂದ ಆರೋಪತರು ಈ ಕೃತ್ಯ ಎಸಗಿದ್ದಾರೆ.
ಸುಧಾಕರ ಪೂಜಾರಿ, ಸುಪ್ರಿಯ ಪುಜಾರಿ, ಅಪ್ಪು ಅಲಿಯಾಸ್ ರಾಜೇಶ್, ಸುಮಂಗಳ ಪೂಜಾರಿ ಹಾಗೂ ಇತರರೊಂದಿಗೆ ಸೇರಿಕೊಂಡು ಶಕುಂತಳಾ ಅವರ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಅದರಲ್ಲಿದ್ದ ಸುಮಾರು ಮೂರುವರೆ ಲಕ್ಷ ಮೌಲ್ಯದ ೮ ಪವನ್ನಷ್ಠು ತೂಕದ ಚಿನ್ನಾಭರಣ, ಟಿವಿ, ಕಪಾಟು, ಬಟ್ಟೆ, ಪಾತ್ರೆ, ಗ್ರೈಂಡರ್, ಮಿಕ್ಸರ್, ಮರದ ಫರ್ನಿಚರ್ಗಳು, ಶೋಕೇಶ್ ಮತ್ತು ಅಮೂಲ್ಯ ದಾಖಲಾತಿ ಪತ್ರಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಮಾರ್ಚ್ 5ರಂದು ಬೆಳಗ್ಗೆ 9 ಗಂಟೆಗೆ ಶಕುಂತಳಾ ಶೆಟ್ಟಿ ತನ್ನ ಗಂಡನ ಜೊತೆಯಲ್ಲಿ ಆರೋಪಿತರಲ್ಲಿ ವಿಚಾರಿಸಲು ಹೋದಾಗ ಜೀವ ಬೆದರಿಕೆ ಒಡ್ಡಿದ್ದಾರೆ. ಆರೋಪಿಗಳು ಸುಮಾರು ಎಂಟುವರೆ ಲಕ್ಷಕ್ಕಿಂತಲೂ ಜಾಸ್ತಿ ನಷ್ಠವನ್ನುಂಟು ಮಾಡಿರುವುದಾಗಿ ಶಕುಂತಳಾ ಶೆಟ್ಟಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರತಿದೂರು ದಾಖಲು:
ಈದು ಗ್ರಾಮದ ಇಂಜಿನಡ್ಕದ ಎಂಬಲ್ಲಿ ಮಾರ್ಚ್ ೦೪ರ ಬೆಳಗ್ಗೆ 10 ಗಂಟೆಗೆ ಸುಪ್ರಿಯಾ ಎಂಬವರು ತನ್ನ ಹಕ್ಕಿನ ಈದು ಗ್ರಾಮದ ಸರ್ವೆ ನಂಬ್ರ 110/7 ರಲ್ಲಿ 0.20 ಎಕ್ರೆ ಜಾಗದಲ್ಲಿ ತಂದೆ ಸುಧಾಕರ ಪೂಜಾರಿ, ತಂಗಿ ಸುಮಂಗಳ ಇವರ ಜೊತೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಅದೇ ವೇಳೆಗೆ ಈ ಹಿಂದೆ ಜಾಗವನ್ನು ಮಾರಾಟ ಮಾಡಿದ್ದ ಶಕುಂತಳಾ ಶೆಟ್ಟಿ ಹಾಗೂ ಆಕೆಯ ಗಂಡ ನಿತ್ಯಾನಂದ ಶೆಟ್ಟಿಯು ಸುಪ್ರಿಯಾ ಅವರ ಜಾಗಕ್ಕೆ ಅಕ್ರಮ ಪ್ರವೇಶಗೈದು, ಇಲ್ಲಿ ಯಾವುದೇ ಕೆಲಸ ಮಾಡದಂತೆ ತಡೆಯೊಡ್ಡಿದ್ದಾರೆ. ಅದೇ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.