ಕಾರ್ಕಳ, ಮಾ 07 (DaijiworldNews/HR): ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರ ತೆರವಿಗೆ ಒತ್ತಾಯಿಸಿ ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯ ಯಶಸ್ಸಿಗೆ ಕಾರ್ಕಳ ಭಾಗದ ಸಮಾನ ಮನಸ್ಕ ಸಂಘಟನೆಗಳ ಸಿದ್ದತಾ ಸಭೆ ಕಾರ್ಕಳದ ಪ್ರಕಾಶ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯ ಶುಭದಾ ರಾವ್ ವಹಿಸಿದ್ದು, ಟೋಲ್ ವಿರೋಧಿ ಹೋರಾಟ ಸಮಿತಿಯ ಪರವಾಗಿ ಸಂಚಾಲಕ ಮುನೀರ್ ಕಾಟಿಪಳ್ಳ ಹಾಗೂ ಅಮೃತ್ ಶೆಣೈ ಪಾದಯಾತ್ರೆಯ ರೂಪುರೇಷೆ ವಿವರಿಸಿದರು.
ಕಾರ್ಕಳ ಭಾಗದವರಿಗೆ ಹೆಜಮಾಡಿ, ಸುರತ್ಕಲ್ ಎರಡು ಕಡೆ ಟೋಲ್ ಪಾವತಿಸುವುದರಿಂದ ಆಗುವ ತೊಂದರೆಗಳ ಕುರಿತು ಸಂಘಟನೆಗಳ ಪ್ರಮುಖರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪಾದಯಾತ್ರೆಯ ಯಶಸ್ಸಿಗೆ ಕಾರ್ಕಳ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದೆಂದು ಸಭೆಯು ತೀರ್ಮಾನಿಸಿತು. ಇದೇ ಸಂದರ್ಭ ಪಾದಯಾತ್ರೆಯ ಪೋಸ್ಟರ್ ಅನ್ನು ವೇದಿಕೆಯಲ್ಲಿದ್ದ ಮುಖಂಡರು ಬಿಡುಗಡೆ ಮಾಡಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಸದಾಶಿವ ದೇವಾಡಿಗ, ಮೂಸಬ್ಬ ಪಕ್ಷಿಕೆರೆ, ಯೋಗೀಶ್ ಇನ್ನಾ, ಅಜಿತ್ ಹೆಗ್ಡೆ ಮಾಳ, ದೀಪಕ್ ಹೆಗ್ಡೆ, ಲಿಯೋ ಫೆರ್ನಾಂಡೀಸ್, ಅನಿತಾ ಡಿಸೋಜ, ನವೀನ್ ರಾವ್, ನಿತಿನ್ ಬಂಗೇರ, ಪುರಸಭಾ ಸದಸ್ಯ ಸೋಮನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.