ಮಂಗಳೂರು, ಮಾ 07 (DaijiworldNews/MS): ಉಕ್ರೇನ್’ನಲ್ಲಿ ಸಿಲುಕಿದ್ದ ಮಂಗಳೂರು ಮೂಲದ ಐವರು ವಿದ್ಯಾರ್ಥಿಗಳು ಇಂದು ತಾಯ್ನಾಡಿಗೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ.
ಮಂಗಳೂರಿನ ದೇರೇಬೈಲ್ ನ ಅನೈನಾ ಅನ್ನ, ಮೂಡುಬಿದಿರೆಯ ದಾಲ್ವಿನ್ ಪ್ರೀತಿ ಅರಾನ್ಹಾ, ಪಡೀಲ್ ನ ಕ್ಲಾಟನ್ ಡಿಸೋಜಾ, ಮಾರ್ಗನ್ಸ್ ಗೇಟ್ನಿಂದ ಸಾದ್ ಅರ್ಷದ್ ಅಹ್ಮದ್ ಹಾಗೂ ದೇರಲಕಟ್ಟೆಯ 4 ನೇ ವರ್ಷದ ವೈದ್ಯ ವಿದ್ಯಾರ್ಥಿನಿ ಅಕ್ಷಿತಾ ಪುರುಷೋತ್ತಮ ಮಂಗಳೂರಿಗೆ ವಾಪಾಸ್ಸಾಗಿದ್ದಾರೆ.
ಇಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪೋಷಕರು, ಸಂಬಂಧಿಕರು ಸಂತಸದಿಂದ ಬರಮಾಡಿಕೊಂಡರು. ಈ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಖಾರ್ಕೀವ್ ಭಾಗದಲ್ಲಿ ವಾಸ್ತವ್ಯದಲ್ಲಿದ್ದರು ಎಂದು ತಿಳಿದುಬಂದಿದೆ.
ಉಕ್ರೇನ್ನಿಂದ ಮಂಗಳೂರಿಗೆ ಹಿಂತಿರುಗುವ ತನಕ ನಿರಂತರ ಸಂಪರ್ಕದಲ್ಲಿದ್ದು, ತಾಯ್ನಾಡಿಗೆ ಹಿಂತಿರುಗುವಲ್ಲಿ ಸಹಾಯ ಮಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರಿಗೆ ವಿದ್ಯಾರ್ಥಿಗಳು ಸೇರಿ, ಹೂಗುಚ್ಚ ನೀಡಿ ಕೇಕ್ ಕತ್ತರಿಸುವ ಮೂಲಕ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಅಕ್ಷಿತಾಳಿಗೆ ಲಿಸಾ ಸಾಥ್ :
ಉಕ್ರೇನ್ ನಿಂದ ಹಿಂತಿರುಗಿದ್ದ ಅಕ್ಷಿತಾ ತಾವು ಸಾಕಿದ್ದ ಬೆಕ್ಕು ಲಿಸಾಳೊಂದಿಗೆ ತಾಯ್ನಾಡಿಗೆ ವಾಪಾಸಾಗಿದ್ದಾರೆ. "ಲಿಸಾ 2 ತಿಂಗಳ ಮರಿಯಾಗಿದ್ದಾಗ ದತ್ತು ತೆಗೆದುಕೊಂಡಿದ್ದೆ. ಇದರೊಂದಿಗೆ 10 ತಿಂಗಳ ಒಡನಾಟವಿದೆ. ಮರಳಿ ಉಕ್ರೇನ್ಗೆ ವಾಪಾಸಾಗುವ ಯಾವ ಭರವಸೆಯೂ ಇಲ್ಲದ ಕಾರಣ ಲಿಸಾಳನ್ನು ನನ್ನೊಂದಿಗೆ ಕರೆತಂದಿದ್ದು, ಮಂಗಳೂರಿಗೆ ಕರೆತರಲು ಅಗತ್ಯವಿರುವ ದಾಖಲೆಗಳ ಮದ್ಯೆಯಲ್ಲಿ ನನಗೆ ಯಾವುದೇ ಅಡಚಣೆಯಾಗಲಿಲ್ಲ" ಎನ್ನುತ್ತಾರೆ ಅಕ್ಷಿತಾ.