ಮಂಗಳೂರು, ಮಾ 07 (DaijiworldNews/HR): ಹಿಜಾಬ್ ವಿವಾದದ ವಿಡಿಯೋ ವೈರಲ್ ಆಗಿರುವ ದಯಾನಂದ ಪೈ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಸಾಯಿ ಸಂದೇಶ್ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿದುಬಂದಿದೆ.
ಜೀವ ಬೆದರಿಕೆ ಕರೆಗಳು ಬರುತ್ತಿರುವ ಸಂಬಂಧ ಸೈಬರ್ ಠಾಣೆಗೆ ದೂರು ನೀಡಲಾಗಿದ್ದು, ವಿದೇಶಿ ಸಂಖ್ಯೆಗಳಿಂದ ಸಾಯಿ ಸಂದೇಶ್ ಅವರಿಗೆ ಕರೆಗಳು ಬರುತ್ತಿದ್ದು, ಇನ್ಸ್ಟಾಗ್ರಾಮ್, ವಾಟ್ಸಾಪ್ ಮೂಲಕವೂ ಕರೆಗಳು ಬರುತ್ತಿದೆ ಎಂದು ದೂರು ನೀಡಿದ್ದಾರೆ.
ಇನ್ನು ಇತ್ತೀಚೆಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮತ್ತು ಕಾಲೇಜಿನ ಪುರುಷ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ದೂರುಗಳು ದಾಖಲಾಗಿವೆ. ಕಾಲೇಜು ಈಗ ಆನ್ಲೈನ್ ತರಗತಿಗಳನ್ನು ಮಾತ್ರ ನಡೆಸುತ್ತಿದೆ.