ಮಂಗಳೂರು, ಮಾ. 06 (DaijiworldNews/SM): ಕಳೆದ ಮೂರು ದಿನಗಳಿಂದ ನಗರದ ಯು.ಎಸ್.ಮಲ್ಯ, ಗೋಲ್ಡನ್ ಶಟ್ಲ್ ಅಕಾಡೆಮಿ ಹಾಗೂ ಕೆ.ಎಂ.ಸಿ.ಯ ಮರೀನಾ ಕ್ರೀಡಾಂಗಣಗಳಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ 825 ಕ್ರೀಡಾಪಟುಗಳು 20ಕ್ಕೂ ಅಧಿಕ ವಿಭಾಗಗಳಲ್ಲಿ ಭಾಗವಹಿಸಿದ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಯೋಜಿಸಿದ ಮಂಗಳಾ ಕಪ್-2022 ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನ ಮೆಂಟ್ ಮುಕ್ತಾಯಗೊಂಡಿದೆ.
ರವಿವಾರ ನಗರದ ಯು.ಎಸ್. ಮಲ್ಯ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಕ್ಕ ಗ್ರೂಪ್ ನ ಮುಖ್ಯಸ್ಥ ಕೆ.ಮಹಮ್ಮದ್ ಹಾರೀಸ್ ಮಾತನಾಡಿ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನ್ಮೆಂಟ್ ಆಯೋಜಿಸುವ ಮೂಲಕ ಬ್ಯಾಡ್ಮಿಂಟನ್ ಗೆ ಹೊಸ ಜೀವ ಸಿಕ್ಕಿದಂತಾಗಿದೆ. ಕ್ರೀಡಾಪಟುಗಳಿಗೆ ಹೊಸ ವೇದಿಕೆಯನ್ನು ನೀಡಿದಂತಾಗಿದೆ ಎಂದರು.
ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಕಾರ್ಯದರ್ಶಿ ಐವನ್ ಪತ್ರಾವೋ ಮಾತನಾಡಿ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅವರು ಮಂಗಳಾ ಕಪ್ ಆಯೋಜಿಸುವ ಮೂಲಕ ಬರೀ ಮಂಗಳೂರಿಗೆ ಮಾತ್ರವಲ್ಲ ರಾಜ್ಯಕ್ಕೊಂದು ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ನ ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ಮಂಗಳೂರು ಎಂಆರ್ ಪಿಎಲ್ ನ ಎಚ್ಆರ್ ವಿಭಾಗ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ಅಶೋಕ್ ಕುಮಾರ್ ಹೆಗ್ಡೆ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಾಧನೆಯನ್ನು ವಿವರಿಸಿದರು. ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಶಿವಪ್ರಸಾದ್ ಪ್ರಭು ವಂದಿಸಿದರು. ಆಡಳಿತ ಸಮಿತಿಯ ಸಲಹೆಗಾರ ಪರಿಮೇಳಝಗನ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಓದಿದರು. ಸುಮಿತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.