ಮಂಗಳೂರು, ಮಾ. 06 (DaijiworldNews/SM): ಯುದ್ಧಗ್ರಸ್ತ ಉಕ್ರೇನ್ ನ ಖಾರ್ಕಿವ್ ನಲ್ಲಿದ್ದ ಕರಾವಳಿಯ ಕುವರಿಯೊಬ್ಬಳು ತವರಿಗೆ ಮರಳಿದ್ದು ಕಣ್ಣೆದುರೇ ಸಾವು ನೋವು ಯುದ್ಧದ ಭೀಕರತೆಯನ್ನು ನೋಡಿದ್ದ ಆಕೆ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹೀನಾ ಫಾತೀಮಾ, ಭಾರತ ದೇಶದ ತ್ರಿವರ್ಣ ಧ್ವಜ ನಮ್ಮ ಪ್ರಾಣ ಉಳಿಸಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯವಾಗಿ ಬಣ್ಣವನ್ನು ಪಡೆದುಕೊಂಡು ಖಾಲಿ ಹಾಳೆಯಲ್ಲಿ ಬಣ್ಣ ಬಳಿದು ರಾಷ್ಟ್ರ ಧ್ವಜವನ್ನು ತಯಾರಿಸಿ ಅದನ್ನು ಹಿಡಿದುಕೊಂಡು ಹಲವು ಕಿಲೋ ಮೀಟರ್ ನಾವು ನಡೆದುಕೊಂಡು ಬಂದೆವು. ಈ ಸಂದರ್ಭದಲ್ಲಿ ಸಮೀಪದಲ್ಲಿ ಬಾಂಬ್ ದಾಳಿಯಾಗುತ್ತಿತ್ತು. ಆದರೆ, ನಮ್ಮ ಕೈಯಲ್ಲಿದ್ದ ರಾಷ್ಟ್ರ ಧ್ವಜ ಪ್ರಾಣ ರಕ್ಷಕವಾಯಿತು ಎಂದು ಹೀನಾ ಫಾತೀಮಾ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಖಾರ್ಕಿವ್, ಕೀವ್ ನಲ್ಲಿ ಉಕ್ರೇನ್ ನಾಗರಿಕರಿಗೆ ಮೊದಲ ಆಧ್ಯತೆ ನೀಡಲಾಗುತ್ತಿತ್ತು. ಉಳಿದಂತೆ ಮಹಿಳೆಯರಿಗೆ ಅವಕಾಶವಿತ್ತು. ಅದರಂತೆ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ರೈಲನ್ನೇರಿ ತುಂಬಿದ ಜನಸ್ತೋಮದಿಂದ ನಗರವನ್ನು ತೊರೆದೆವು. ಆದರೆ, ಅಲ್ಲಿ ಹುಡುಗರಿಗೆ ಅವಕಾಶ ನೀಡಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಹುಡುಗರು ಮತ್ತೆ ೨೫-೩೦ ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ನಡೆದುಕೊಂಡು ಬಂದಿದ್ದರು. ಅವರು ಬರುವ ವೇಳೆ ದಾರಿಯುದ್ದಕ್ಕೂ ಬಾಂಬ್ ದಾಳಿ ನಡೆಯುತ್ತಿತ್ತು. ಕೆಲವು ಕಟ್ಟಡಗಳು ಕೂಡ ಬಾಂಬ್ ದಾಳಿಗೆ ಒಳಗಾಗಿತ್ತು ಎಂದಿದ್ದಾರೆ.
ಇನ್ನು ಕನ್ನಡಿಗೆ ನವೀನ್ ಮೃತಪಟ್ಟ ಬಳಿಕ ಎಲ್ಲರ ಆತಂಕ ಹೆಚ್ಚಾಗಿತ್ತು. ಆದರೆ, ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರೆಲ್ಲರ ಸಹಕಾರದಿಂದ ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು ಎಂದು ಹೀನಾ ಫಾತೀಮಾ ಪ್ರತಿಕ್ರಿಯೆ ನೀಡಿದ್ದಾರೆ.