ಮಂಗಳೂರು, ಮಾ 06 (DaijiworldNews/DB): ಪದವಿ ಮುಗಿದ ಬಳಿಕ ಸ್ನಾತಕೋತ್ತರ ಶಿಕ್ಷಣವನ್ನು ಎಲ್ಲರಿಗೂ ಪಡೆಯಲಾಗುವುದಿಲ್ಲ. ಸ್ವಪ್ರಯತ್ನದಿಂದ ಈ ಹಂತಕ್ಕೆ ಏರುವುದು ಒಂದು ಸಾಧನೆಯೇ ಆಗಿದೆ ಎಂದು ಹಿಂದಿ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಮುರಳೀಧರ ನಾಯಕ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಅಂತಿಮ ವರ್ಷದ ಹಿಂದಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಆಗಾಜ್- 2022” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ವಿದ್ಯಾರ್ಥಿಗಳು ಶ್ರಮಪಟ್ಟು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಕಾಲೇಜಿಗೂ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.
ಹಿಂದಿ ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯ ನಡೆಸಿಕೊಟ್ಟರು. ಹಿಂದಿ ಸಂಘದ ಉಪಾಧ್ಯಕ್ಷೆ ಡಾ. ನಾಗರತ್ನಾ ಎನ್. ರಾವ್, ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾ ಆರ್., ಉಪನ್ಯಾಸಕರಾದ ಡಾ. ಸಂಜಯ್ ಕುಮಾರ್, ಗುರುದತ್, ಪದವಿ ವಿಭಾಗದ ಉಪನ್ಯಾಸಕರಾದ ಡಾ. ನಾಗರತ್ನಾ ಶೆಟ್ಟಿ, ಜ್ಯೋತಿ, ಡಾ. ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಲಕ್ಷ್ಮಿ ವಂದಿಸಿದರು. ರೂಪಾ ನಿರೂಪಿಸಿದರು.