ಸುಳ್ಯ, ಮಾ 06 (DaijiworldNews/HR): ಯಾವುದೇ ಸರಕಾರಿ ಕಚೇರಿಗಳ ಒಳಗಡೆ ಮಧ್ಯವರ್ತಿಗಳು, ಬ್ರೋಕರ್ಗಳು ಓಡಾಡದಂತೆ ಎಲ್ಲಾ ಇಲಾಖೆಗಳ ಅಧೀನ ಕಚೇರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ ಕಡಬದ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಮಧ್ಯವರ್ತಿಗಳ ಕಾಟ ತಪ್ಪಿಲ್ಲ. ಮಾ.5 ರಂದು ಕಡಬದ ತಹಶೀಲ್ದಾರ್ ಕಚೇರಿಯಲ್ಲಿ ಮೇಜಿನ ಮೇಲೆ ದಲ್ಲಾಳಿ ರಾಜಾ ರೋಷವಾಗಿ ಕುಳಿತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಬಂದಾಗ ಹೊರಭಾಗದಲ್ಲಿ ನಿಂತು ಸಹಕರಿಸುತ್ತಾರೆ. ಆದರೆ ಈ ವ್ಯಕ್ತಿ ಕಚೇರಿಯೊಳಗೆ ಬಂದು ಟೇಬಲ್ ಮೇಲೆ ಕುಳಿತುಕೊಳ್ಳುವಷ್ಟು ಸಲುಗೆ ಕೊಟ್ಟವರಾರು ಎಂಬ ಬಗ್ಗೆ ಚರ್ಚೆಯಾಗತೊಡಗಿದೆ.
ಕೆಲ ದಿನಗಳಿಂದ ಅಕ್ರಮ ಸಕ್ರಮ ಪೈಲ್ ಗಳು ಆಗುತ್ತಿದ್ದು ಮಧ್ಯವರ್ತಿಗಳಿಂದ ಅಧಿಕಾರಿಗಳಿಗೆ ಸುಗ್ಗಿಕಾಲವಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂದಿದೆ. ಅದೇ ರೀತಿ ಕೆಲಸದ ಸಮಯದಲ್ಲೇ ಕಚೇರಿ ಸಿಬ್ಬಂದಿಯೋರ್ವ ಆರಾಮವಾಗಿ ಕುಳಿತು ಬಜ್ಜಿ ತಿನ್ನುವುದು ವೀಡಿಯೊದಲ್ಲಿ ಕಾಣಿಸುತ್ತದೆ. ಅಂತೆಯೇ ಜನಗಳು ಕೂಡ ದುಡ್ಡು ಕೊಡುವುದರಲ್ಲಿ ನಾ ಮುಂದು ತಾ ಮುಂದು ಎಂಬಂತೆ ವರ್ತಿಸಿರುವುದು ಕೂಡ ಆಶ್ಚರ್ಯ ಸಂಗತಿಯಾಗಿದೆ. ಅಧಿಕಾರಿಗಳು ಜನರನ್ನು ನೇರ ಬನ್ನಿ ಎಂದು ಹೇಳುವುದು ಮಾತ್ರ ಇಕ್ಕುವುದು ಗಾಳ ಎಂಬಂತಾಗಿದೆ.
ಇನ್ನು ಮಧ್ಯವರ್ತಿಗಳು, ಬ್ರೋಕರ್ಗಳ ಮಾಹಿತಿ ಕಂಡುಬಂದರೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಯಾರಾದರೂ ಮಾಹಿತಿ ನೀಡಿದರೆ ತುರ್ತಾಗಿ ಅವರ ಮೇಲೆ ಶಿಸ್ತುಕ್ರಮವನ್ನು ಜರುಗಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿರುವ ಮಾತನ್ನು ಉಳಿಸಿಕೊಳ್ಳುತ್ತಾರ ಎಂಬ ಪ್ರಶ್ನೆ ಸಾರ್ವಜನಿಕರದ್ದು.