ಮಂಗಳೂರು, ಮಾ 06 (DaijiworldNews/DB): ವ್ಯಕ್ತಿಯೋರ್ವ ಕನ್ನಡ ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯಿಸಿಕೊಂಡು ಶಿಕ್ಷಕಿಯೋರ್ವರಿಗೆ 2.20 ಲಕ್ಷ ರೂ. ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶಿಕ್ಷಕಿಯ ಅಣ್ಣ ಮ್ಯಾಟ್ರಿಮೋನಿಯಲ್ ನಲ್ಲಿ ಪ್ರೊಫೈಲ್ ತೆರೆದಿದ್ದು, ಅದರಲ್ಲಿಅನಿಲ್ ಚಂದ್ರ ಎಂಬಾತನ ಪ್ರೊಫೈಲ್ ನ್ನು ತಂಗಿಗೆ ಶೇರ್ ಮಾಡಿದ್ದರು. ಅಲ್ಲದೆ ಆತನ ಮೊಬೈಲ್ ನಂಬರ್ ಕೂಡಾ ನೀಡಿದ್ದರು. ಆತ ತಾನು ಬೆಲ್ಜಿಯಂನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಬಳಿಕ ಇಬ್ಬರು ಫೋನ್ ನಲ್ಲಿ ಮಾತುಕತೆ ನಡೆಸುತ್ತಿದ್ದರು.
ಫೆ. 23ರಂದು ಶಿಕ್ಷಕಿಗೆ ಕರೆ ಮಾಡಿದ್ದ ಆತ ತಾನು ಪ್ರಸ್ತುತ ಜೈಪುರದಲ್ಲಿದ್ದು, ಸಂಬಂಧಿಯೋರ್ವರ ಚಿಕಿತ್ಸೆಗಾಗಿ 1.20 ಲಕ್ಷ ರೂ. ಹಣ ಅಗತ್ಯವಾಗಿದ್ದು, ತತ್ ಕ್ಷಣ ಕಳುಹಿಸುವಂತೆ ಕೋರಿದ್ದ. ಅಲ್ಲದೆ, ಡಾ. ಸಲೀ ಅಲಿ ಎಂಬವರ ಖಾತಾ ಸಂಖ್ಯೆಯನ್ನೂ ನೀಡಿದ್ದ. ಆತನ ಮಾತನ್ನು ನಂಬಿದ ಶಿಕ್ಷಕಿ ಹಣ ವಗಾವಣೆ ಮಾಡಿದ್ದರು. ಮರುದಿನ ಮತ್ತೆ ಆತ 1 ಲಕ್ಷ ರೂ.ಗೆ ಮನವಿ ಮಾಡಿದ್ದು, ಈ ವೇಳೆಯೂ ಶಿಕ್ಷಕಿ ಹಣ ವರ್ಗಾವಣೆ ಮಾಡಿದ್ದರು.
ಬಳಿಕ ಫೆ 26ರಂದು ಕರೆ ಮಾಡಿ ಭಾರತಕ್ಕೆ ಬರುವುದಾಗಿ ತಿಳಿಸಿದ್ದ. ಆದರೆ ಅಂದು ಬೆಳಗ್ಗೆ+917428862622 ಸಂಖ್ಯೆಯಿಂದ ಶಿಕ್ಷಕಿಗೆ ಕರೆ ಬಂದಿದ್ದು, 'ಅನಿಲ್ ಚಂದ್ರ 'yellow tag certificate' ಇಲ್ಲದೆ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರು ಮರಳಬೇಕಾದರೆ 1.15 ಲಕ್ಷ ರೂ. ಅವಶ್ಯವಿದ್ದು, ತತ್ ಕ್ಷಣ ಕಳುಹಿಸಿಕೊಡಬೇಕು’ ಎಂದು ವ್ಯಕ್ತಿಯೋರ್ವ ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಶಿಕ್ಷಕಿ ಹಣ ವರ್ಗಾಯಿಸುವುದಕ್ಜೆ ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.