ಮಂಗಳೂರು, ಮಾ 05 (DaijiworldNNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಬಜೆಟ್ 'ರಿವರ್ಸ್ ಗೇರ್ ಬಜೆಟ್' ಆಗಿದ್ದು, ರಾಜ್ಯದ ಅಭಿವೃದ್ಧಿಯನ್ನು ಹಿಂದಕ್ಕೆ ಕೊಂಡೊಯ್ಯುಲಿದೆ ಎಂದು ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಇದು ಆಲ್ ರೌಂಡ್ ಬಜೆಟ್ ಅಂತಾರೆ. ಆದರೆ ವಾಸ್ತವದಲ್ಲಿ ಇದು ಹಿಟ್ ಆ್ಯಂಡ್ ರನ್ ಬಜೆಟ್. ಸರ್ಕಾರದ ಬಂಡವಾಳವೇ ಸಾಲ ಮತ್ತು ಸಾರಾಯಿ ಮೇಲೆ ಅವಲಂಬಿತವಾಗಿದೆ. ಸರಕಾರ 72,000 ಸಾವಿರ ಕೊಟಿ ರೂಪಾಯಿ ಸಾಲ ಮಾಡುವುದಾದರೆ ಸರಿಸುಮಾರು 29 ಸಾವಿರ ಕೋಟಿ ರೂಪಾಯಿಗಳನ್ನ ಅಬಕಾರಿ ಮೂಲಕ ಸಂಗ್ರಹಿಸಲು ಹೊರಟಿದೆ. ಒಟ್ಟು 2.65 ಲಕ್ಷ ಕೋಟಿ ರೂ. ಬಜೆಟ್ ನಲ್ಲಿ, 1.01 ಲಕ್ಷ ಕೋಟಿ ರೂ. ಸಾಲ ಮತ್ತು ಸಾರಾಯಿಯಿಂದಲೇ ಬರುತ್ತಿದೆ. ಕೊರತೆ ಬಜೆಟ್ ನಲ್ಲಿ ಸರಕಾರ ನಡೆಯುತ್ತದೆಯೆಂದರೆ ಬಂಡವಾಳ ಹಾಕಲು ಯಾರೂ ಮುಂದೆ ಬರುವುದಿಲ್ಲ. ಈ ಮೂಲಕ ಸರ್ಕಾರ ಜನರನ್ನ ಮತ್ತಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ನೀರಾವರಿ ತಜ್ಞರು ಕೂಡ ಹೌದು. ಸರ್ಕಾರ 26 ಸಾವಿರ ಕೋಟಿ ರೂಪಾಯಿಗಳನ್ನ ನೀರಾವರಿಗೆ ಮೀಸಲಿಟ್ಟಿದೆ. ಆದರೆ ನೀರಾವರಿ ಇಲಾಖೆ ಸುಮಾರು 17 ಸಾವಿರ ಕೋಟಿ ರೂ. ಬಾಕಿ ಬಿಲ್ ಇನ್ನೂ ಪಾವತಿ ಆಗಿಲ್ಲ. ಸರ್ಕಾರ ಕೇವಲ 9 ಸಾವಿರ ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವೇ? ಎಂದು ಖಾದರ್ ಪ್ರಶ್ನಿಸಿದ್ದಾರೆ.
ಇನ್ನು ಕೊರೊನಾದಿಂದ ನೋಂದವರಿಗೆ ಮೇಲೆತ್ತುವ ಕೆಲಸ ಮಾಡಿಲ್ಲ, ಸರಕಾರ ಪರಿಹಾರ ಬರೀ ಕಾಗದದ ಮೇಲಷ್ಟೇ ಇದೆ. ಅದರಲ್ಲೂಕೊರೊನಾದಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿ ಅಸ್ತಿತ್ವಕ್ಕಾಗಿಯೇ ಹೋರಾಡುತ್ತಿರುವ ಅಸಂಖ್ಯಾತ ಅಸಂಘಟಿತ ವರ್ಗಕ ಸರ್ಕಾರ ಯಾವುದೇ ಕಾರ್ಯಕ್ರಮ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ನಾರಾಯಣ ಗುರು ಹೆಸರಿನಲ್ಲಿ ಈಗ ವಸತಿ ಶಾಲೆ ತೆರೆಯಲು ಮುಂದಾಗಿದ್ದು, ನಾರಾಯಣ ಗುರುಗಳ ಟ್ಯಾಬ್ಲೊ ತಿರಸ್ಕರಿಸದವರು ಈಗ ಜನರ ಆಕ್ರೋಶಕ್ಕೆ ಹೆದರಿ ಈಗ ವಸತಿ ಶಾಲೆ ಕಾರ್ಯಕ್ರಮ ತಂದಿದ್ದಾರೆ ಎಂದು ಟೀಕಿಸಿದರು.