ಬೆಳ್ತಂಗಡಿ, ಮಾ 05 (DaijiworldNews/DB): ಯುದ್ಧಗ್ರಸ್ತ ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ಸಿಲುಕಿದ್ದ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ ಸುರಕ್ಷಿತವಾಗಿ ದೆಹಲಿ ತಲುಪಿದ್ದಾರೆ.
ಖಾರ್ಕೀವ್ ನಿಂದ ಲಿವಿವ್ ತಲುಪಿ ಅಲ್ಲಿಂದ ಪೋಲೆಂಡ್ ಗೆ ಬಂದಿದ್ದರು. ಪೋಲೆಂಡ್ ನಿಂದ ಭಾರತೀಯ ರಾಯಭಾರ ಕಚೇರಿ ಮುಖಾಂತರ ಅವರಿಂದು ದೆಹಲಿಗೆ ಬಂದಿಳಿದಿದ್ದಾರೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದ್ದು, ಬಳಿಕ ಮಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಮಗಳು ಉಕ್ರೇನ್ ನಲ್ಲಿರುವುದರಿಂದ ಆತಂಕಿತರಾಗಿದ್ದ, ಕುಟುಂಬಸ್ಥರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. "ಇನ್ನೂ ಹಲವಾರು ವಿದ್ಯಾರ್ಥಿಗಳು ಅಲ್ಲೇ ಸಿಲುಕಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ ಸರಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರರು, ಉಜಿರೆ ಗ್ರಾಪಂನವರು ನಮಗೆ ನಿರಂತರ ಧೈರ್ಯ ತುಂಬಿದ್ದರು’ ಎಂದು ಹೀನಾ ಫಾತಿಮಾ ಅವರ ಮಾವ ಆಬಿದ್ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.