ಬೆಳ್ತಂಗಡಿ, ಮಾ 05 (DaijiworldNews/MS): ವಿವಾದಗಳಿಗೆ ಕಾರಣವಾಗಿದ್ದ ಉಡುಪಿ ಅರಣ್ಯ ಸಂಚಾರಿ ದಳದ ರೇಂಜ್ ಫಾರೆಸ್ಟ್ ಆಫೀಸರ್ (ಆರ್ಎಫ್ಒ) ಮಂಗಳೂರಿನಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಸಚಿನ್ ಅವರನ್ನು ಬೀದರಿಗೆ ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ( ಕೆ.ಎ.ಟಿ)ಯು ಆದೇಶ ಹೊರಡಿಸಿದೆ.
ಸರಕಾರದ ವರ್ಗಾವಣೆ ಆದೇಶದ ವಿರುದ್ದ ಸಂದ್ಯಾ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಅಪೀಲು ಸಲ್ಲಿಸಿದ್ದರು. ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದ ಕಡತದೊಂದಿಗೆ ಲಗತ್ತಿಸಲಾದ ಉಲ್ಲೇಖ ಪತ್ರವು ಶಾಸಕ ಹರೀಶ್ ಪೂಂಜಾ ಅವರದ್ದು ಎಂದು ನ್ಯಾಯಪೀಠವು ಗಮನಿಸಿದ್ದು, ವರ್ಗಾವಣೆಯಲ್ಲಿ ನೀತಿ ನಿಯಮ ಪಾಲಿಸಿಲ್ಲ ರಾಜಕೀಯ ಹಸ್ತಕ್ಷೇಪ ನಡೆದಿರುವುದು ಕಂಡು ಬರುತ್ತದೆ. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳಿಂದ ಇದು ಸ್ಪಷ್ಟವಾಗಿದೆ ಎಂದು ಪರಿಗಣಿಸಿ ನ್ಯಾಯಮೂರ್ತಿ ಬೂದಿಹಾಳ್ ಆರ್ ಬಿ ನೇತೃತ್ವದ ನ್ಯಾಯಪೀಠ ಹಾಲಿ ಸರ್ಕಾರದ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ್ದು, ಇದು ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ದುರುದ್ದೇಶಪೂರಿತ ಮತ್ತು ರಾಜಕೀಯ ಹಸ್ತಕ್ಷೇಪದಿಂದ ಕೂಡಿದೆ, ಎಂದು ಪರಿಗಣಿಸಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದು ಅವರನ್ನು ಹಿಂದೆ ಇದ್ದ ಹುದ್ದೆಗೆ ಮರು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಸಂದ್ಯಾ ಅವರನ್ನು ಬೀದರಿಗೆ ವರ್ಗಾಯಿಸುವಂತೆ ಶಾಸಕ ಹರೀಶ್ ಪೂಂಜ ಅವರು ಮುಖ್ಯ ಮಂತ್ರಿಯವರಿಗೆ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಸಕರ ಆಪ್ತನ ಅಕ್ರಮ ಮರ ಕಳ್ಳತನ ಪತಗತೆ ಹಚ್ಚಿದ್ದಕ್ಕಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.