ಉಡುಪಿ, ಮಾ 05 (DaijiworldNews/MS): ಮೊದಲ ಹೆಂಡತಿಗೆ ತ್ರಿವಳಿ ತಲಾಖ್ ನೀಡಿ ಎರಡನೇ ಮದುವೆಯಾಗಿ ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.
ಶೆಹನಾಝ್ ಹಾಗೂ ಯುಸೂಪ್ ದಂಪತಿಗಳಿದ್ದರು 15 ವರ್ಷ ಸಂಸಾರ ಮಾಡಿದ್ದರು. ಅಂಬಾಗಿಲಿನ ನಿವಾಸಿ ಉಸ್ಮಾನ್ ಅವರ ಪುತ್ರಿ ಶೆಹನಾಝ್ ಅವರನ್ನು 2006ರಲ್ಲಿ ತೆಂಕ ಎರ್ಮಾಳಿನ ಮಯ್ಯದ್ದಿ ಅವರ ಪುತ್ರ ಮೊಹಮ್ಮದ್ ಯುಸೂಪ್ ವಿವಾಹವಾಗಿದ್ದ. ಈ ದಂಪತಿಗಳಿಗೆ ಓರ್ವ ಪುತ್ರನಿದ್ದಾನೆ.
ಆರೋಪಿ ಯುಸೂಫ್ ಪತ್ನಿಗೆ ಹಣ ತೆಗೆದುಕೊಂಡು ಬಾ, ಇಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ನಿನಗೆ ಜಾಗ ಇಲ್ಲ ಎಂದು ಆಗ್ಗಾಗ್ಗೆ ಪೀಡಿಸಿ ಹಲ್ಲೆ ನಡೆಸುತ್ತಿದ್ದ. ಆ ಬಳಿಕ ಶಹನಾಝ್ ತನ್ನ ತಂದೆ ಮನೆಯಲ್ಲೇ ವಾಸವಾಗಿದ್ದರು.
ಈ ವರ್ಷ ಆರೋಪಿ ಯುಸೂಫ್, ಶಹನಾಝ್ನ ತಂದೆಯವರಲ್ಲಿ, ನಿಮ್ಮ ಮಗಳಿಗೆ ತ್ರಿಬಲ್ ತಲಾಖ್ ನೀಡುತ್ತಿದ್ದೇನೆ. ನಾನು ಕೃಷ್ಣಾಪುರದ ಝೀನತ್ನೊಂದಿಗೆ ಮದುವೆ ಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತ್ರಿಬಲ್ ತಲಾಕ್ ಮೂಲಕ ಮೋಸ ಆಗಿದ್ದು, ಇದಕ್ಕೆ ಆರೋಪಿ ಯುಸೂಫ್ ಮತ್ತು ಅವನ 2ನೇ ಮದುವೆಗೆ ಸಹಕರಿಸಿದ ಅಲ್ತಾಫ್, ಸಿರಾಜ್, ಆಯಿಷಾ, ನಫೀಸಾ, ಹಸನ್ ಮತ್ತು ಝೀನತ್ ವಿರುದ್ಧ ಶಹನಾಝ್ ಅವರು ದೂರು ನೀಡಿದ್ದಾರೆ.