ಬಂಟ್ವಾಳ, ಮಾ.04 (DaijiworldNews/SM): ಮನೆಯ ಕೋಣೆಯ ಶೋಕೇಸ್ ನಲ್ಲಿರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ ಹಾಗೂ ಬಂಗಾರದ ಸೊತ್ತುಗಳು ಕಳವಾದ ಘಟನೆ ಮೊಡಂಕಾಪು ಎಂಬಲ್ಲಿ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ಬಿ. ಮೂಡ ಗ್ರಾಮದ ಮೊಡಂಕಾಪು ಗೊಳಿನೆಲೆ ಶುಭಾಗೃಹ ಸುಮನ ಭಂಡಾರಿ ಅವರ ಮನೆಯಿಂದ ಕಳವು ನಡೆದಿದೆ. ಸುಮಾರು 4.90 ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಬಂಗಾರದ ಒಡವೆಗಳು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಜ್ರದ ಪೆಂಡೆಂಟ್, ಕರಿಮಣಿ ಸರ, ಕಿವಿಯೋಲೆ, ಅಮೇರಿಕ ನ್ ಕಿವಿಯೋಲೆ, ಒಡ್ಡ ಉಂಗುರ, ಚಿನ್ನದ ಕರಿಮಣಿ, ಚಿನ್ನದ ತಾಳಿ, ಸರ, ಪೆಂಡೆಂಟ್ ಸೇರಿದಂತೆ ಒಟ್ಟು 4.90 ರೂ ಮೌಲ್ಯದ ಸಂಪತ್ತು ಕಳವಾಗಿದೆ.
ಸುಮನ ಭಂಡಾರಿ ಅವರು ಬೆಂಗಳೂರಿನಲ್ಲಿ ಕಂಪನಿಯ ಒಂದರ ಮಾಲಕರಾಗಿದ್ದು ಮೊಡಂಕಾಪು ಮನೆಯಲ್ಲಿ ತಾಯಿ ಹಾಗೂ ಮನೆ ಕೆಲಸದವರು ಮಾತ್ರ ವಾಸವಾಗಿದ್ದರು. ಫೆ.28 ರಂದು ಸುಮನಾ ಅವರ ತಾಯಿಗೆ ಹುಷಾರಿಲ್ಲ ಎಂಬ ಕಾರಣಕ್ಕಾಗಿ ಮೊಡಂಕಾಪು ಮನೆಗೆ ಬಂದವರು ಅವರ ಜೊತೆಗೆ ತಂದಿದ್ದು ಬಂಗಾರ ಹಾಗೂ ವಜ್ರದ ಒಡೆವೆಗಳನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಹಾಕಿ ಅವರು ತಂಗುವ ಕೋಣೆಯ ಶೋಕೇಸ್ ನಲ್ಲಿ ಇರಿಸಿದ್ದರು. ಫೆ.2 ರಂದು ವ್ಯಾನಿಟಿ ಬ್ಯಾಗ್ ನೋಡುವಾಗ ಅದರಲ್ಲಿ ಒಡವೆಗಳು ಕಾಣದೆ ನಾಪತ್ತೆಯಾಗಿತ್ತು. ಕೋಣೆ ಹಾಗೂ ಮನೆಯಲ್ಲಿ ಹುಡುಕಾಡಿದಾಗ ಎಲ್ಲೂ ಸಿಗದ ಕಾರಣ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.