ಮಂಗಳೂರು, ಮಾ.04 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿದ್ದ ತಿಪ್ಪಣ್ಣ ನಾಗವ್ವ ಮಾದರ(37) ಅವರು ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇಲ್ಲಿನ ಪಾಂಡೇಶ್ವರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್. ಪಿ. ಕಛೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಬರುತ್ತಿರುವಾಗ ಎ.ಬಿ. ಶೆಟ್ಟಿ ಸರ್ಕಲ್ ಬಳಿ ಅಸ್ವಸ್ತಗೊಂಡು ಕುಸಿದು ಬಿದ್ದಿದ್ದಾರೆ. ಈ ವೇಳೆ ಸಿ.ಎ.ಆರ್. ಸಿಬ್ಬಂದಿ ಎ.ಹೆಚ್.ಸಿ. ರಮೇಶ್ ರವರು ಕೂಡಲೇ ಉಪಚರಿಸಿ ಎಂ. ವಿ. ಶೆಟ್ಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಕೆ ಎಂಸಿ ಆಸ್ಪತ್ರೆಗೆ ರವಾನಿಸುವ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ದೀಪಾ ತಿಪ್ಪಣ್ಣ ಮಾದರ್ ಮತ್ತು ಮಕ್ಕಳಾದ ನಿಹಾರಿಕಾ, ಅನ್ವಿತಾ ಹಾಗೂ ನಿಶಾಂತ್ ಎಂಬ ಮೂರು ಮಕ್ಕಳನ್ನು ಅಗಲಿದ್ದಾರೆ.