ಕಾಸರಗೋಡು, ಮಾ 04 (DaijiworldNews/HR): ಬೈಕ್ಗೆ ಲಾರಿ ಡಿಕ್ಕಿ ಹೊಡೆದು ನಿವೃತ್ತ ಯೋಧರೋರ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿ ಚಾಲಕನೋರ್ವನನ್ನು ಒಂದು ವರ್ಷದ ಬಳಿಕ ಬಂಧಿಸುವಲ್ಲಿ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಯಶಸಸ್ವಿಯಾಗಿದೆ.
ತಮಿಳುನಾಡು ತಿರುಚ್ಚಿಯ ರಾಮಚಂದ್ರ ( 38) ಬಂಧಿತ ಆರೋಪಿ.
ಅಪಘಾತಕ್ಕೆ ಕಾರಣವಾದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 2021 ರ ಮಾರ್ಚ್ 29 ರಂದು ಬೆಳಿಗ್ಗೆ 6 ಗಂಟೆಗೆ ತಲಪಾಡಿ ಬಳಿ ಅಪಘಾತ ನಡೆದಿತ್ತು.
ಅಪಘಾತದಲ್ಲಿ ಮಂಗಳೂರು ಗೈಲ್ ನ ಉದ್ಯೋಗಿಯಾಗಿದ್ದ, ನಿವೃತ್ತ ಯೋಧ ಮಂಜೇಶ್ವರ ಉದ್ಯಾವರ ಗುತ್ತುವಿನ ದಿನೇಶ್ ( 42 ) ಮೃತಪಟ್ಟಿದ್ದರು.
ಇನ್ನು ದಿನೇಶ್ ಚಲಾಯಿಸುತ್ತಿದ್ದ ಬೈಕ್ಗೆ ಕರ್ನಾಟಕ ನೋಂದಣಿಯ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದನು. ಬಳಿಕ ಅಪಘಾತದ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗಿದ್ದ ವಾಹನಗಳ ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದು, ಲಾರಿಯ ಚಾಲಕನ ಸುಳಿವು ಲಭಿಸಿತ್ತು. ಇದರಂತೆ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.