ವಿಶೇಷ ವರದಿ: ಜಗದೀಶ್ ಆರ್. ಬಿ
ಕಾರ್ಕಳ, ಮಾ 04 (DaijiworldNews/DB): ಕಾರ್ಕಳದಲ್ಲಿ ಮಾರ್ಚ್ 10ರಿಂದ 20ರ ತನಕ ಜರಗುವ ಕಾರ್ಕಳ ಉತ್ಸವದ ಪ್ರಯುಕ್ತ ಪ್ರಮುಖ ರಸ್ತೆಯು ದೀಪಾಲಂಕಾರದಿಂದಾಗಿ ಜಗಮಗಿಸಲಿದೆ.
ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಮಂಡಳಿಯವರ ಮುಂದಾಳತ್ವದಲ್ಲಿ ಕಾರ್ಕಳದಲ್ಲಿ ವಿದ್ಯುತ್ ದೀಪಾಲಂಕಾರಗೊಳ್ಳಲಿದೆ.
ಸುಮಾರು 70 ಕಿ.ಮೀ ರಸ್ತೆ ವ್ಯಾಪ್ತಿಯಲ್ಲಿ ವಿದ್ಯುದ್ದೀಪಾಲಂಕಾರ ನಡೆಯಲಿದೆ. 170 ಮಂದಿ ಕಾರ್ಮಿಕರು ಅಹೋರಾತ್ರಿ ಕೆಲಸದಲ್ಲಿ ನಿರತರಾಗಿದ್ದು, ಬರೋಬರಿ 1.20 ಲಕ್ಷ ವಿದ್ಯುತ್ ಬಲ್ಬ್ ಗಳನ್ನು ಅಳವಡಿಸುವ ಕಾರ್ಯ ನಡೆಸುತ್ತಿದ್ದಾರೆ. ಜೋಡುರಸ್ತೆಯಿಂದ ಅನಂತಪದ್ಮನಾಭ ದೇವಳದವರೆಗೆ ಸುಮಾರು 4.5 ಕಿ.ಮೀ ಉದ್ದಕ್ಕೆ ರಸ್ತೆ ಅಡ್ಡವಾಗಿ 170 ಲೈನ್ ಎಳೆಯಲಾಗಿದ್ದು, ಪ್ರತಿಯೊಂದು ಲೈನ್ ನಲ್ಲಿ 170ರಿಂದ 180 ಬಲ್ಬ್ ಗಳನ್ನು ಅಳವಡಿಸಲಾಗಿದೆ.
ನವೋದಯ ಸರ್ಕಲ್ ಬೈಪಾಸ್ ನಿಂದ ಬಂಗ್ಲೆಗುಡ್ಡೆ ಸರ್ಕಲ್ ತನಕ, ಅನಂತಪದ್ಮನಾಭ ದೇವಳದಿಂದ ತೆಳ್ಳಾರು ಸೇತುವೆ, ಅನಂತಪದ್ಮನಾಭ ದೇವಳದಿಂದ ಕೋಟಿಚೆನ್ನಯ್ಯ ಥ್ರೀ ಪಾರ್ಕ್, ಅನಂತಶಯನದಿಂದ ಗೊಮ್ಮಟ್ಟಬೆಟ್ಟ, ದಾನಸಾಲೆಯಿಂದ ಆನೆಕೆರೆ, ಆನೆಕೆರೆಯಿಂದ ಮೂರುಮಾರ್ಗ ರಸ್ತೆಗಳಲ್ಲಿ ಇದೇ ರೀತಿಯಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಲಾಗುತ್ತಿದೆ.
ಅನಂತಶಯನ ವೃತ್ತ, ಬಸ್ ನಿಲ್ದಾಣ ವೃತ್ತ, ಸರ್ವಜ್ಞ ವೃತ್ತ, ಜೋಡುರಸ್ತೆ ವೃತ್ತ, ಆನೆಕೆರೆ ವೃತ್ತ, ಪ್ರವಾಸಿ ಬಂಗಲೆ ಎದುರುಗಡೆಯ ಜೈನ್ ವೃತ್ತ, ಎಸ್ವಿಟಿ ಜಂಕ್ಷನ್ ವೃತ್ತ, ಕಾಬೆಟ್ಟು ಜಂಕ್ಷನ್, ಬಂಗ್ಲೆಗುಡ್ಡೆ ಜಂಕ್ಷನ್, ಭವಾನಿ ಸರ್ಕಲ್, ನಮೋದಯ ಸರ್ಕಲ್, ಬಜಗೋಳಿ ಜಂಕ್ಷನ್, ಹೊಸ್ಮಾರು ಜಂಕ್ಷನ್, ಅಜೆಕಾರು ಜಂಕ್ಷನ್, ಮುನಿಯಾಲು ಜಂಕ್ಷನ್, ಮುದ್ರಾಡಿ ಜಂಕ್ಷನ್, ಹೆಬ್ರಿ ಜಂಕ್ಷನ್, ಜಾರ್ಕಳ ಜಂಕ್ಷನ್, ಬೈಲೂರು ಜಂಕ್ಷನ್, ಬೆಳ್ಮಣ್ ಜಂಕ್ಷನ್ ಸೇರಿ 20 ಸರ್ಕಲ್ಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ.
ಅನಂತಪದನಾಭ ಕ್ಷೇತ್ರದ ಮುಂಭಾಗದಲ್ಲಿರುವ ನಾಗರಬಾವಿ(ಕೆರೆ)ಗೂ ವಿಶೇಷ ದೀಪಾಲಂಕಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಸ್ವಚ್ಚತಾ ಕಾರ್ಯ ನಡೆದಿದೆ.
ಪ್ರತ್ಯೇಕ ಮೀಟರ್ ಅಳವಡಿಕೆ ಕಾರ್ಕಳ ಉತ್ಸವ ಸಂದರ್ಭದಲ್ಲಿ ಇಲಾಖೆ ವತಿಯಿಂದ ಅಳವಡಿಸಿದ ವಿದ್ಯುತ್ ದೀಪಾಲಂಕಾರಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಮೀಟರ್ ಅಳವಡಿಸಲಾಗುತ್ತಿದೆ. 32 ವರ್ಷದಿಂದ ಮೈಸೂರು ದಸರಾದಲ್ಲಿ ದೀಪಲಂಕಾರ ಮಾಡುತ್ತಿರುವ ಕಂಟ್ರಾಕ್ಟರ್ ಮೈಸೂರಿನ ಯಚನಹಳ್ಳಿಯ ನಾಗೇಶ್ ಸುಬ್ಬಯ್ಯ ಸಹಿತ 13 ಮಂದಿ ಗುತ್ತಿಗೆದಾರರು ದೀಪಾಲಂಕಾರಕ್ಕಾಗಿ ಆಗಮಿಸಿದ್ದಾರೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್ ಕುಮಾರ್ ಅವರ ಹೊಸ ಯೋಜನೆಗಳಲ್ಲಿ ಕಾರ್ಕಳ ಉತ್ಸವ ಒಂದಾಗಿದೆ.