ಮಂಗಳೂರು, ಮಾ 04 (DaijiworldNews/MS): ಮಂಗಳೂರು ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಪ್ರತಿಯೊಬ್ಬ ಮಹಿಳಾ ಸದಸ್ಯರು ಆರ್ಥಿಕ ಸಬಲೀಕರಣ ಸಾಧಿಸುವಂತೆ ಮಾಡಲು ಸರಕಾರದ ವತಿಯಿಂದಲೇ ಇ-ಕಾಮರ್ಸ್ ವ್ಯವಸ್ಥೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
https://daijiworld.ap-south-1.linodeobjects.com/Linode/img_tv247/ms-0403222-ashwath.jpg
ಅವರು ಫೆ.3 ರ ಗುರುವಾರ ಪುರಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಮಹಿಳಾ ಸಂಜೀವಿನಿ ಒಕ್ಕೂಟಗಳ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳಾ ಸ್ವಸಹಾಯ ಸಂಘಗಳಲ್ಲಿ ಈಗ ತರಹೇವಾರಿ ಉತ್ಪನ್ನಗಳು ತಯಾರಾಗುತ್ತಿದ್ದು, ಭಾರೀ ವಹಿವಾಟು ನಡೆಯುತ್ತಿದೆ. ಇದರಲ್ಲಿ ಅಕ್ರಮಕ್ಕೆ ಎಡೆ ಮಾಡಿಕೊಡಬಾರದೆನ್ನುವ ಉದ್ದೇಶದಿಂದ ಈ ಸಂಘಗಳ ವಹಿವಾಟು ಸ್ವರೂಪವನ್ನೆಲ್ಲ ಸಂಪೂರ್ಣ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಅಮೆಜಾನ್ ಮತ್ತು ಫ್ಲಿಫ್ಕಾರ್ಟ್ ತರಹದ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸ್ವಸಹಾಯ ಸಂಘಗಳಲ್ಲಿರುವವರು ವಾರ್ಷಿಕ ಕನಿಷ್ಠ 1 ಲಕ್ಷ ರೂಪಾಯಿಯಷ್ಟಾದರೂ ಆದಾಯ ಗಳಿಸುವಂತೆ ಮಾಡಬೇಕೆನ್ನುವುದೇ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ `ಮಹಿಳಾ ಸಂಜೀವಿನಿ’ ಯೋಜನೆಯ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಸ್ವಸಹಾಯ ಸಂಘಗಳಲ್ಲಿರುವ ಬುಕ್ ರೈಟರ್ಸ್ ಗಳಿಗೆ ಬ್ಯಾಂಕಿಂಗ್ ತರಬೇತಿ ನೀಡುವ ಜತೆಗೆ ಸದ್ಯದಲ್ಲೇ ಮೊಬೈಲ್ ಬ್ಯಾಂಕಿಂಗ್ ಕೈಗೆತ್ತಿಕೊಳ್ಳುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜೊತೆಗೆ, ಮಹಿಳೆಯರು ತಯಾರಿಸುವ ಉತ್ಪನ್ನಗಳು ಸುರಕ್ಷಿತವಾಗಿ ಇಟ್ಟುಕೊಳ್ಳಲು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲೂ ಒಂದು ಗೋದಾಮು ಕಟ್ಟಡವನ್ನು ನಿರ್ಮಿಸಿ ಕೊಡಲಾಗುವುದು. ಈ ಯೋಜನೆಯಡಿ ಹಲವೆಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದೆಡೆಗಳಲ್ಲೂ ತ್ವರಿತ ಗತಿಯಲ್ಲಿ ಕಟ್ಟಡವನ್ನು ಕಟ್ಟಿಕೊಡಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.
ಮಹಿಳೆಯರು ಸ್ವಸ್ಥ ಸಮಾಜದ ಆಧಾರಸ್ತಂಭಗಳಾಗಿದ್ದು, ಇವರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಕೇಂದ್ರ ಸರಕಾರದ `ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯಡಿ 1 ಕೋಟಿ ರೂ.ವರೆಗೂ ಯಾವುದೇ ಖಾತ್ರಿ ಇಲ್ಲದೆ ಬ್ಯಾಂಕ್ ಸಾಲ ಕೊಡಲಾಗುತ್ತಿದೆ. ಇದು ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಯಲು ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ 20 ಲಕ್ಷ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ಸದಸ್ಯೆಯರಾಗಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 62 ಸಾವಿರ ಸದಸ್ಯೆಯರಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಕೃಷಿ, ಪಶು ಸಂಗೋಪನೆ ನರೇಗಾ, ಸ್ವಚ್ಛ ಭಾರತ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳಡಿಯಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಲಾಗಿದೆ ಎಂದರು.
'ಸಂಜೀವಿನಿ' ಯೋಜನೆಯಡಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ವಿಶ್ವಾಸಾರ್ಹ ಮಾರುಕಟ್ಟೆ ಸಿಗುವಂತೆ ಮಾಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಮನ್ನಣೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದರ ಜತೆಗೆ ಇಲಾಖೆಯ ಮೂಲಕ ಸರ್ಟಿಫಿಕೇಟ್ ಕೋರ್ಸುಗಳನ್ನು ಕೂಡ ಒದಗಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್ ಮುಂತಾದವರು ಉಪಸ್ಥಿತರಿದ್ದರು.