ಪುತ್ತೂರು, ಮಾ.03 (DaijiworldNews/SM): ತಾಲೂಕಿನ ಕೆಮ್ಮಿಂಜೆ ಗ್ರಾಮದ ಮಹೇಂದ್ರಕುಮಾರ್ ಎಂಬುವವರ ಮನೆಯ ಬಾಗಿಲಿನ ಚಿಲಕವನ್ನು ಒಡೆದು 50.930 ಗ್ರಾಂ ತೂಕದ 43 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2006ರ ಮಾರ್ಚ್ ತಿಂಗಳಲ್ಲಿ ಪ್ರಕರಣ ನಡೆದಿದ್ದು, ಜಿಲ್ಲಾ ಅಪರಾಧ ವಿಭಾಗದ ನಿರೀಕ್ಷಕ ತಿಲಕ್ ಚಂದ್ರ ಅವರು ಆರೋಪಿಗಳಾದ ಸಂತೋಷ್ ಮತ್ತು ನಾಗರಾಜ್ ಬಳೆಗಾರ್ ಎಂಬುವರನ್ನು ಅಪರಾಧ ನೋಂದಣಿ ಸಂಖ್ಯೆ 24/2006 ರ ಅಡಿಯಲ್ಲಿ ಬಂಧಿಸಿ ವಶಪಡಿಸಿಕೊಂಡ ಬೆಲೆಬಾಳುವ ಸೊತ್ತುಗಳನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ಜಮಾ ಮಾಡಿರುತ್ತಾರೆ. ಪುತ್ತೂರು ನಗರ ಠಾಣೆಯ ಅಂದಿನ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುರತ್ಕಲ್ ಹೊನ್ನಕಟ್ಟೆಯ ವಿದ್ಯಾನಗರ ನಿವಾಸಿ ನಾಗರಾಜ ಬಳೆಗಾರ್ (34) ಎಂಬಾತನ ವಿರುದ್ಧ ಸಿ.ಸಿ.ಸಂ.864/2014 ರಂತೆ ಪ್ರಕರಣದ ವಿಚಾರಣೆ ನಡೆದಿದ್ದು, ಮಾ.3 ರಂದು ಗುರುವಾರ ಶಿಕ್ಷೆ ಪ್ರಕಟವಾಗಿತ್ತು. ನಾಗರಾಜ್ ಅವರು ಐಪಿಸಿ ಸೆಕ್ಷನ್ 457 ರ ಅಡಿಯಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಅದೇ ರೀತಿ ಐಪಿಸಿ ಸೆಕ್ಷನ್ 380 ರ ಅಡಿಯಲ್ಲಿ ಇನ್ನೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 4,000 ರೂಪಾಯಿ ದಂಡ ತೆರಬೇಕಾಗುತ್ತದೆ. ದಂಡ ಪಾವತಿಸಲು ತಪ್ಪಿದಲ್ಲಿ ಐದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆರೋಪಿ ಸದ್ಯ ಕಲಬುರಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.