Karavali
ಮಂಗಳೂರು: ದೈತ್ಯ ರಾಷ್ಟ್ರ ರಷ್ಯಾಕ್ಕೆ ಸವಾಲಾಗಿರುವುದು ಬಲವಲ್ಲ ! ಉಕ್ರೇನ್ನಿಗರ ರಾಷ್ಟ್ರಪ್ರೇಮ !!
- Thu, Mar 03 2022 10:50:42 PM
-
ಮಂಗಳೂರು, ಮಾ.03 (DaijiworldNews/SM): ದೇಶದೊಳಗೆಯೇ ಬಾಂಬ್ ಸ್ಫೋಟಿಸಿಕೊಂಡು, ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ದೇಶದ ನಾಗರಿಕರನ್ನೇ ಹತ್ಯೆ ಮಾಡುವ ತಾಲಿಬಾನ್ ಮಾದರಿಯ ಕ್ರೂರಿಗಳ ಮಧ್ಯೆ ತನ್ನ ರಾಷ್ಟ್ರದ ಉಳಿವಿಗಾಗಿ ಸೈನಿಕರ ಜೊತೆಗೆ ಗನ್ ಹಿಡಿದು ಹೋರಾಡುತ್ತಿರುವ ಉಕ್ರೇನ್ ರಾಷ್ಟ್ರದ ಪ್ರಜೆಗಳ ದೇಶಪ್ರೇಮ ನಿಜಕ್ಕೂ ಈ ಜಗತ್ತಿಗೆ ಮಾದರಿಯಾಗಿದೆ. ದೈತ್ಯ ರಾಷ್ಟ್ರ ರಷ್ಯಾಕ್ಕೆ ಎಂಟು ದಿನಗಳಾದರೂ ಕೂಡಾ ಪುಟ್ಟ ರಾಷ್ಟ್ರ ಉಕ್ರೇನ್ ಅನ್ನು ಮಣಿಸಲು ಸಾಧ್ಯವಾಗದೇ ಇರುವುದು ಉಕ್ರೇನ್ ಸೈನ್ಯದ ಬಲವಲ್ಲ ಬದಲಾಗಿ ಉಕ್ರೇನ್ ಸೈನ್ಯ ಮತ್ತು ನಾಗರಿಕರ ಕೆಚ್ಚೆದೆಯ ಹೋರಾಟ, ರಾಷ್ಟ್ರಪ್ರೇಮ.
ಜಗತ್ತು ಎರಡನೆಯ ಮಹಾಯುದ್ಧದ ಬಳಿಕ ಶಾಂತಿ ಸ್ಥಾಪನೆಗಾಗಿ ಹೆಚ್ಚು ಒತ್ತು ನೀಡುತ್ತಿದ್ದರೂ ಕೂಡಾ ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ತನ್ನ ಸೈನ್ಯದ ಬಲವನ್ನು ಹೆಚ್ಚಿಸುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಷ್ಟ್ರವೂ ಕೂಡಾ ಅತ್ಯಾಧುನಿಕ ಯುದ್ದೋಪಕರಣಗಳನ್ನು ಸಂಗ್ರಹಿಸುತ್ತಾ ತಮ್ಮ ತಮ್ಮ ರಕ್ಷಣಾ ವಿಭಾಗವನ್ನು ಬಲಿಷ್ಠಗೊಳಿಸುತ್ತಿದೆ. ಜಗತ್ತಿನ ಪ್ರತೀ ರಾಷ್ಟ್ರಗಳೂ ಕೂಡಾ ಇಂದು ಗಡಿ ವಿವಾದವನ್ನು ತನ್ನ ಮೇಲೆ ಎಳೆದುಕೊಂಡಿದೆ, ತನ್ನ ಭೂ ಪ್ರದೇಶಗಳನ್ನು ವಿಸ್ತರಿಸಿಕೊಳ್ಳಲು ಪ್ರತೀ ದಿನವೂ ಬಹಳಷ್ಟು ರಾಷ್ಟ್ರಗಳು ಹವಣಿಸುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಪಾಕಿಸ್ತಾನ ಮತ್ತು ಚೀನಾ. ಭಾರತದ ಗಡಿಯನ್ನು ಆಕ್ರಮಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಭಾರತದ ಗಡಿಯಲ್ಲಿ ಉಪಟಳ ನೀಡುತ್ತಿದೆ. ಜಾಗತಿಕ ಸಮಸ್ಯೆಯಾಗಿರುವ ಈ ಗಡಿ ವಿವಾದ ಮುಂದುವರಿದ ಭಾಗವೇ ಪುಟ್ಟ ರಾಷ್ಟ್ರ ಉಕ್ರೇನ್ ಮತ್ತು ದೈತ್ಯ ರಾಷ್ಟ್ರ ರಷ್ಯಾದ ಸಮರ..!
ಉಕ್ರೇನ್ ಇತಿಹಾಸದುದ್ದಕ್ಕೂ ಪರಾಕ್ರಮಣಕ್ಕೊಳಪಟ್ಟಂತಹ ದೇಶವಾಗಿದೆ. ಗ್ರೀಕರು, ರೋಮನ್ನರು, ಗಾಥರೂ, ಹೂಣರೂ, ಕಾಝಾರರು ಹೀಗೆ ಸಾಲು ಸಾಲು ದಾಳಿಗೆ ಒಳಗಾಗಿ 9ನೆಯ ಶತಮಾನದಲ್ಲಿ ಉಕ್ರೇನ್ ಕೀಫನ್ ರಷ್ಯದ ಆಡಳಿತದಲ್ಲಿ ಸೇರಿಹೋಯಿತು. 1917ರ ಫೆಬ್ರವರಿಯ ರಷ್ಯನ್ ಕ್ರಾಂತಿಯ ಅನಂತರ ಉಕ್ರೇನಿಗೆ ಸ್ವಯಾಡಳಿತಾಧಿಕಾರ ನೀಡಬೇಕೆಂಬ ಚಳುವಳಿಗೆ ಮನ್ನಣೆ ದೊರಕಿತು. ಆಗ ರಷ್ಯದಲ್ಲಿದ್ದ ತಾತ್ಕಾಲಿಕ ಸರ್ಕಾರ ಉಕ್ರೇನಿಯನ್ ಕೇಂದ್ರೀಯ ಮಂಡಳಿಗೆ ಪುರಸ್ಕಾರ ನೀಡಿತು. ಅಕ್ಟೋಬರ್ ಕ್ರಾಂತಿಯಲ್ಲಿ ಬಾಲ್ಷೆವಿಕರು ಅಧಿಕಾರ ಪಡೆದುಕೊಂಡ ಮೇಲೆ ಉಕ್ರೇನ್ ಸ್ವತಂತ್ರ ಗಣರಾಜ್ಯವೆಂದು ಸಾರಿಕೊಂಡಿತು. ಉಕ್ರೇನ್ 1917ರ ಡಿಸೆಂಬರಿನಲ್ಲಿ ಸೋವಿಯತ್ ಗಣರಾಜ್ಯವೆಂದು ಘೋಷಿಸಿ ಕೊಂಡಿತು. ಆದರೆ, ಎರಡನೆಯ ಮಹಾಯುದ್ಧ ಕಾಲದಲ್ಲಿ ಉಕ್ರೇನ್ ಜರ್ಮನ್ ಆಕ್ರಮಣಕ್ಕೆ ತುತ್ತಾಗಿತ್ತು. ಆದರೆ, ಆ ಬಳಿಕದ ದಿನಗಳಲ್ಲಿ ರಷ್ಯಾ ಒಕ್ಕೂಟದಿಂದ ಹೊರಬಿದ್ದಿದ್ದ ಉಕ್ರೇನ್ ಅನ್ನು ಮತ್ತೆ ರಷ್ಯಾದೊಂದಿಗೆ ವಿಲೀನ ಮಾಡುವ ಕನಸು ರಷ್ಯಾಕ್ಕಿತ್ತಾದರೂ ನೇರ ಯುದ್ಧ ಸಾರುವ ಧೈರ್ಯ ತೋರಿರಲಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದ ಉಕ್ರೇನ್ ರಷ್ಯಾ ಬಿಕ್ಕಟ್ಟು ೨೦೨೨ರ ಫೆ. ೨೫ರಂದು ಜ್ವಾಲಾಮುಖಿಯಾಗಿ ಸ್ಫೋಟಗೊಂಡಿತು. ಜಗತ್ತಿನ ಊಹೆಯಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಾರ್ ಪುಟಿನ್ ಉಕ್ರೇನ್ ಮೇಲೆ ಅಧೀಕೃತವಾಗಿ ಯುದ್ಧ ಘೋಷಿಸಿ, ದಾಳಿಗೆ ಮುಂದಾದರು. ರಷ್ಯಾದ ದಾಳಿಗೆ ಉಕ್ರೇನ್ ಅಕ್ಷರಶ: ನಡುಗಿ ಹೋಗಿದೆ.. ಭೂ ಸೇನೆ, ವಾಯು ಸೇನೆ, ಜಲಸೇನೆ ಎಲ್ಲದರಲ್ಲೂ ಬಲಿಷ್ಠವಾದ ರಷ್ಯಾದ ಮುಂದೆ ಉಕ್ರೇನ್ ಕೇವಲ ಹುಲಿಯ ಮುಂದೆ ನಿಂತಿದ್ದ ಜಿಂಕೆಯಂತಿದೆ. ರಷ್ಯಾದ ಕಾರ್ಯಾಚರಣೆಯಲ್ಲಿರುವ ಸೇನೆಯ ಸಂಖ್ಯೆ ೯ ಲಕ್ಷವಾದರೆ ಉಕ್ರೇನ್ ಸೇನೆಯ ಸಂಖ್ಯೆ ಕೇವಲ ೧.೯೬ ಲಕ್ಷ..! ಒಂದೊಮ್ಮೆ ಶಸ್ತ್ರಾಸ್ತ್ರ ಬಿಟ್ಟು ಸೈನಿಕರೇ ಪರಸ್ಪರ ಹೋರಾಟ ಮಾಡಿದರೆ ಒಂದೇ ದಿನದಲ್ಲಿ ಉಕ್ರೇನ್ ಸೈನಿಕರು ನಿರ್ನಾಮವಾಗಬಹುದೇನೋ.. ರಷ್ಯಾದಲ್ಲಿ ೫೧ ಜಲಂತರ್ಗಾಮಿ ನೌಕೆಯಿದ್ದರೆ ಉಕ್ರೇನ್ ಬಳಿಯಲ್ಲಿ ಜಲಂತರ್ಗಾಮಿ ನೌಕೆಯೇ ಇಲ್ಲ.. ಏರ್ ಮಿಸೈಲ್, ಮಿಸೈಲ್ ಲಾಂಚರ್, ಸಶಸ್ತ್ರ ಯುದ್ಧ ವಾಹನ, ಪ್ಯಾರ ಮಿಲಿಟರಿ, ರಿಸರ್ವ್ ಮಿಲಿಟರಿ ಯಾವುದೇ ವಿಭಾಗವನ್ನು ಗಮನಿಸಿದರೂ ಕೂಡಾ ರಷ್ಯಾದ ಮುಂದೆ ಉಕ್ರೇನ್ ಏನೇನೂ ಅಲ್ಲ. ಅದಲ್ಲದೆ, ಜಗತ್ತಿನ ವಿನಾಶದ ಕೈಗನ್ನಡಿ ಎಂದೇ ಹೇಳಲಾಗುವ ಅಣುಬಾಂಬ್ ಸಿಡಿತಲೆಗಳು ರಷ್ಯಾ ಬತ್ತಳಿಕೆಯಲ್ಲಿ ಇದೆ. ಇಷ್ಟೆಲ್ಲಾ ಬಲವನ್ನು ಹೊಂದಿರುವ ರಷ್ಯಾಕ್ಕೆ ಎಂಟು ದಿನಗಳಾದರೂ ಕೂಡಾ ಮಣಿಸಲು ಸಾಧ್ಯವಾಗದೇ ಇರುವುದಕ್ಕೆ ಒಂದೇ ಕಾರಣ.. ಆ ಕಾರಣದಿಂದಲೇ ಉಕ್ರೇನ್ ದೈತ್ಯ ರಾಷ್ಟ್ರ ರಷ್ಯಾದ ಮುಂದೆ ತೊಡೆ ತಟ್ಟಿ ನಿಂತಿದ್ದು. ಆ ಕಾರಣ ಬೇರಾವುದೂ ಅಲ್ಲ "ಉಕ್ರೇನಿಯನ್ನರ ರಾಷ್ಟ್ರಪ್ರೇಮ"...
ಉಕ್ರೇನಿಯನ್ನರ ರಾಷ್ಟ್ರ ಪ್ರೇಮ ಯಾವ ಮಟ್ಟದಲ್ಲಿ ಆ ರಾಷ್ಟ್ರಕ್ಕೆ ಶಕ್ತಿ ತುಂಬಿದೆಯೆಂದರೆ ನೂರಾರು ಪುಟ್ಟ ದೇಶಗಳಿಗೆ ಸಮಾನವಾದಂತಹ ರಷ್ಯಾ ಎಂಬ ಬಲಿಷ್ಠ ರಾಷ್ಟ್ರವನ್ನೇ ಬೆವರುವಂತೆ ಮಾಡಿದೆ. ಜಗತ್ತಿನೆದುರು ಏಕಾಂಗಿಯಾದರೂ ಕೂಡಾ, ಸೋಲು ಕಣ್ಣ ಮುಂದೆ ಇದ್ದರೂ ಸಹ ಉಕ್ರೇನ್ ತನ್ನತನವನ್ನು ಬಿಟ್ಟು ಕೊಡುತ್ತಿಲ್ಲ. ದೈತ್ಯ ಸೇನೆಯೆದು ಪುಟ್ಟ ರಾಷ್ಟ್ರ ಎದುರಾಳಿಯಾಗಿ ನಿಂತು ಹೋರಾಡುವಾಗ ಮಹಾಭಾರತದ ಅಭಿಮನ್ಯುವಿನ ಕಥೆಯು ನೆನಪಾಗುತ್ತದೆ. ಮಹಾಭಾರತದಲ್ಲಿ ಉಲ್ಲೇಖವಾದಂತೆ :"ಅರ್ಜುನನ ಪುತ್ರ ಅಭಿಮನ್ಯು ಕೌರವರ ಚಕ್ರವ್ಯೂಹದೊಳಗೆ ನುಗ್ಗುತ್ತಾನೆ. ಬಾಲಕನಾದರೂ ಸಹ ಎದೆಗುಂದದೆ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನರಂತಹ ವೀರ ಯೋಧರಿದ್ದ ಚಕ್ರವ್ಯೂಹದೊಳಗೆ ನುಗ್ಗಿದಂತಹ ಅಭಿಮನ್ಯು ಒಂದಿನಿತೂ ಜಗ್ಗದೆ ವೀರಾವೇಶದಿಂದ ಹೋರಾಡುತ್ತಾನೆ. ರಕ್ತದ ಮಡುವಿನಲ್ಲಿದ್ದರೂ ಸಹ ವೈರಿಗಳಿಗೆ ತಕ್ಕ ಉತ್ತರವನ್ನು ಕೊಡುತ್ತಾ ವೈರಿಗಳು ನಡುಗುವಂತೆ ಮಾಡಿದ್ದ" ಎಂಬುದು ಪುರಾಣ. ಬಹುಶ: ಉಕ್ರೇನ್ ಪರಿಸ್ಥಿತಿಯೂ ಹಾಗೆಯೇ ಆಗಿದೆ. ದಿನದಿಂದ ದಿನಕ್ಕೆ ರಷ್ಯಾ ಸೇನೆಯು ಉಕ್ರೇನ್ ಪ್ರಮುಖ ನಗರಗಳಲ್ಲಿ ಭೀಕರ ದಾಳಿ ಮಾಡುತ್ತಾ, ವಶಪಡಿಸಿಕೊಳ್ಳುತ್ತಿದ್ದರೂ ಸಹ ಉಕ್ರೇನ್ ಮಾತ್ರ ತನ್ನತನವನ್ನು ಬಿಟ್ಟು ಕೊಡದೆ ಉಕ್ರೇನ್ ನ ಪ್ರತಿಯೊಬ್ಬರೂ ವೀರಾವೇಶದಿಂದ ಹೋರಾಡುತ್ತಾ ಬಲಿಷ್ಠ ಸೇನೆಯನ್ನು ತಕ್ಕ ಮಟ್ಟಿಗೆ ಮೆಟ್ಟಿ ನಿಂತಿದ್ದಾರೆ. ಉಕ್ರೇನ್ ಪ್ರಜೆಗಳ ದೇಶ ಪ್ರೇಮ ಜಗತ್ತಿಗೆ ನೀಡಿದಂತಹ ದೇಶ ಪ್ರೇಮದ ಸಂದೇಶ ಎಂದರೆ ತಪ್ಪಾಗಲಾರದು...
ಯುದ್ಧ ದಾಹದಿಂದ ಉಕ್ರೇನ್ ನಂತಹ ಪುಟ್ಟ ರಾಷ್ಟ್ರವನ್ನ ಸರ್ವನಾಶ ಮಾಡಲು ಹೊರಟಿರುವ ರಷ್ಯಾ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವುದರ ಮಧ್ಯೆ ಉಕ್ರೇನ್ ಪ್ರಜೆಗಳು ಧೈರ್ಯ ಕಳೆದುಕೊಳ್ಳದೆ ಹೋರಾಡುತ್ತಿದ್ದಾರೆ. ಅಲ್ಲಿನ ಕೆಲವೊಂದು ಘಟನೆಗಳನ್ನು ಕಂಡಾಗ ನಮ್ಮಲ್ಲಿ ದೇಶ ಪ್ರೇಮದ ಕಿಚ್ಚು ಹತ್ತುವುದರಲ್ಲಿ ಸಂದೇಹವೇ ಇಲ್ಲ... ರಷ್ಯಾ ಆರಂಭಿಸಿರುವ ದಾಳಿಯಲ್ಲಿ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಂಡು ಗೆಲುವು ಸಾಧಿಸಲಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿಕೆ ನೀಡಿದ್ದರೆ, ಉಕ್ರೇನ್ ಅಧ್ಯಕ್ಷ ತನ್ನ ದೇಶವನ್ನು ಉಳಿಸಿಕೊಳ್ಳಲು ದೇಶದ ನಾಗರಿಕರಿಗೆ ಕರೆ ನೀಡಿದ್ದರು, ದೇಶದ ಪ್ರತಿಯೊಬ್ಬ ನಾಗರಿಕನೂ ನಮ್ಮ ಮಣ್ಣಿನ ರಕ್ಷಣೆಗಾಗಿ ಸಿದ್ಧರಾಗಿರಿ, ಸೇನೆ ಸೇರುವ ಇಚ್ಚೆಯಿದ್ದರೆ ನಿಮಗೆ ಸೇನಾ ತರಭೇತಿಯ ಜೊತೆಗೆ ಗನ್ ಗಳನ್ನು ನೀಡಲಾಗುವುದು ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ ಮರುಕ್ಷಣವೇ ಉಕ್ರೇನ್ ಪ್ರಜೆಗಳು ತಮ್ಮ ತಾಯ್ನೆಲದ ಉಳಿವಿಗಾಗಿ ವೀರಾವೇಶದಿಂದ ಹೋರಾಟಕ್ಕೆ ಮುಂದಾಗುತ್ತಾರೆ. ಕೈಯಲ್ಲಿ ಗನ್ ಹಿಡಿದು ಕೆಲವು ಉಕ್ರೇನಿಯನ್ನರು ರಷ್ಯಾ ಸೇನೆಯ ವಿರುದ್ಧ ಹೋರಾಟಕ್ಕೆ ಮುಂದಾದ್ರೆ, ಇನ್ನೂ ಕೆಲವರು ರಷ್ಯಾ ಸೈನ್ಯದ ಬಳಿ ದೇಶದ ವಿರುದ್ಧ ಆಕ್ರಮಣ ಮಾಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.ರಷ್ಯಾ ಸೇನೆ ಮುನ್ನುಗ್ಗುವುದನ್ನು ತಡೆಯಲು ಸ್ವಯಂ ಆಹುತಿಯಾದ ಉಕ್ರೇನ್ ಯೋಧ :
ರಾಜಕಾರಣಿಗಳಾಗಲಿ ಅಥವಾ ಇನ್ಯಾರೇ ನಾಯಕರಾಗಲಿ ಅಥವಾ ಪ್ರಜೆಗಳೇ ಆಗಲಿ ಅವರೆಲ್ಲರಿಗಿಂತ ಮಾತೃಭೂಮಿಯ ಮೇಲೆ ಹೆಚ್ಚು ಪ್ರೇಮ ಇಟ್ಟುಕೊಂಡವರು ಕೇವಲ ಯೋಧರೇ ಆಗಿದ್ದಾರೆ. ತಾಯ್ನೆಲದ ರಕ್ಷಣೆಗಾಗಿಯೇ ಬದುಕುತ್ತಿರುವ ಯೋಧರು ತನ್ನೆಲ್ಲಾ ಸುಖಗಳನ್ನು ದೇಶಕ್ಕಾಗಿ ಸಮರ್ಪಿಸಿಕೊಂಡಿರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ರಷ್ಯಾ ಹಾಗೂ ಉಕ್ರೇನ್ ಯುದ್ದದಲ್ಲೂ ದೇಶಪ್ರೇಮದ ಕಿಚ್ಚು ಯೋಧರಲ್ಲಿ ಎಷ್ಟಿದೆ ಎಂಬುದಕ್ಕೆ ಘಟನೆಯೊಂದು ನಡೆದಿದೆ. ರಷ್ಯಾ ಸೇನೆ ಕ್ರೀಮಿಯಾ ಗಡಿಯಿಂದ ದಕ್ಷಿಣ ಖೋರ್ಸ ಪ್ರದೇಶಕ್ಕೆ ಹೆನಿಚೆಸ್ಕ್ ಬ್ರಿಡ್ಜ್ ಮೂಲಕ ಉಕ್ರೇನ್ಗೆ ಪ್ರವೇಶ ಮಾಡಲು ಮುನ್ನುಗ್ಗುತ್ತಿತ್ತು. ರಷ್ಯಾ ಸೇನೆಯ ಪ್ರಯತ್ನವನ್ನು ವಿಫಲಗೊಳಿಸಿ, ದೇಶವನ್ನು ರಕ್ಷಣೆ ಮಾಡಲೆಂದು ಉಕ್ರೇನ್ನ ಮೆರೈನ್ ಬೆಟಾಲಿಯನ್ಗೆ ಸೇರಿದ ಕಕೂನ್ ವಿಟಾಲಿ ವೋಲೋಡಿಮೈರೋವಿಚ್ ಎಂಬ ಸೈನಿಕ ರಷ್ಯಾ ಮುನ್ನುಗ್ಗುತ್ತಿದ್ದ ಬ್ರಿಡ್ಜ್ ಮೇಲೆ ಬಂದು ಬಾಂಬ್ ಗಳನ್ನಿಟ್ಟು ಸ್ಫೋಟಿಸಿಕೊಂಡಿದ್ದಾನೆ. ಸ್ಪೋಟದ ರಭಸಕ್ಕೆ ಸೇತುವೆಯ ಮೇಲಿದ್ದ ಸೈನಿಕನೂ ಕೂಡಾ ಛಿದ್ರವಾಗಿ ಹೋಗಿದ್ದ. ವೀರ ಯೋಧನ ಬಲಿದಾನದಿಂದಾಗಿ ಸೇತುವೆ ಸ್ಫೋಟಗೊಂಡು ರಷ್ಯಾ ಸೇನೆ ಯುದ್ಧ ಟ್ಯಾಂಕರ್ಗಳೊಂದಿಗೆ ಉಕ್ರೇನ್ ಪ್ರವೇಶಿಸಲು ವಿಫಲವಾಗಿತ್ತು
ದೇಶ ರಕ್ಷಣೆಗಾಗಿ 80ರ ಇಳಿವಯಸ್ಸಿನಲ್ಲೂ ಸೇನೆ ಸೇರಲು ಮುಂದಾದ ವೃದ್ಧ !
ರಷ್ಯಾ ದಾಳಿಯಿಂದ ಉಕ್ರೇನ್ ಸೇನೆ ಮಾತ್ರವಲ್ಲದೆ ನಾಗರಿಕರೂ ಕೂಡಾ ಸಾವನ್ನಪ್ಪುತ್ತಿದ್ದಾರೆ. ಮಿಸೈಲ್ ದಾಳಿಯಿಂದ ಕಟ್ಟಡಗಳು ಧರೆಗುರುಳುತ್ತಿದ್ದರೆ, ಉಕ್ರೇನ್ ಮಣ್ಣು ರಕ್ತದ ಬಣ್ಣದೊಂದಿಗೆ ಬದಲಾಗುತ್ತಿದೆ. ರಷ್ಯಾವನ್ನು ಹಿಮ್ಮೆಟ್ಟುವುದಕ್ಕಾಗಿ ಉಕ್ರೇನ್ ತನ್ನ ನಾಗರಿಕರಿಗೆ ಸೇನೆ ಸೇರಲು ಆಹ್ವಾನ ನೀಡಿದ ಹಿನ್ನಲೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕೂಡಾ ಸೇನೆ ಸೇರಲು ಮುಂದಾಗುತ್ತಿದ್ದಾರೆ. ಉಕ್ರೇನ್ ನ 80 ವರ್ಷದ ವಯೋವೃದ್ಧ ಸೇನೆ ಸೇರಲು ಮುಂದಾಗಿದ್ದು, ಉಕ್ರೇನ್ ಪ್ರಜೆಗಳ ರಾಷ್ಟ್ರಪ್ರೇಮವನ್ನು ಎತ್ತಿ ತೋರಿಸುತ್ತಿದೆ. ಸೈನ್ಯ ಸೇರುವ ಮಹಾದಾಸೆಯೊಂದಿಗೆ ತನ್ನ ಬ್ಯಾಗ್ ನಲ್ಲಿ ಎರಡು ಶರ್ಟ್, 2 ಪ್ಯಾಂಟ್, ಸ್ಯಾಂಡ್ವಿಚ್ ಗಳು ಹಾಗೂ ಟೂತ್ ಬ್ರಷ್ ಗಳನ್ನಿಟ್ಟುಕೊಂಡು ಸೇನೆ ಸೇರಲೆಂದು ಬಂದಿದ್ದಾರೆ. ತನ್ನ ಮೊಮ್ಮಕ್ಕಳ ರಕ್ಷಣೆಗಾಗಿ ಸೇನೆ ಸೇರಲು ಹೊರಟಿರುವುದಾಗಿ ನೀಡಿರುವ ಆ ವೃದ್ಧನ ಹೇಳಿಕೆ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ತನ್ನ ಮಕ್ಕಳಿಗಗಿ ಆಸ್ತಿಯನ್ನು ಕೂಡಿಡುವಂತಹ ಈ ಕಾಲದಲ್ಲಿ ತನ್ನ ಮೊಮ್ಮಕ್ಕಳ ಭವಿಷ್ಯಕ್ಕಾಗಿ ಸೇನೆ ಸೇರಲು ಮುಂದಾದ ವೃದ್ಧರ ದೇಶಪ್ರೇಮದ ಕಿಚ್ಚನ್ನು ಜಗತ್ತು ಕೊಂಡಾಡುತ್ತಿದೆ.
ಹನಿಮೂನ್ ಹೋಗಬೇಕಿದ್ದ ನವಜೋಡಿ ಉಕ್ರೇನ್ ಸೇನೆ ಸೇರಿತು !
ಉಕ್ರೇನಿಯನ್ನರ ದೇಶಪ್ರೇಮದ ಕಿಚ್ಚು ಬಲಾಢ್ಯ ರಷ್ಯಾವನ್ನು ತಡೆಹಿಡಿದಿದ್ದು ನಿಜಕ್ಕೂ ಅದ್ಭುತವೇ ಸರಿ.. ಉಕ್ರೇನ್ ನ ನವಜೋಡಿಯೊಂದು ಮದುವೆಯಾದ ಮರುದಿನವೇ ಸೈನ್ಯಕ್ಕೆ ಸೇರುವ ಮೂಲಕ ಜಗತ್ತಿನಲ್ಲಿ ಹೊಸದೊಂದು ಚರಿತ್ರೆಯನ್ನೇ ಬರೆದಿದ್ದಾರೆ. ಉಕ್ರೇನಿಯನ್ ನ 21 ವರ್ಷದ ಯಾರ್ಯನಾ ಅರೀವಾ ಹಾಗೂ 24 ವರ್ಷದ ಸ್ವಿಯಾಟೋಸ್ಲಾವ್ ಫರ್ಸಿನ್ ಮದುವೆಯಾಗಿ ಮನೆಯಲ್ಲಿ ನೆಮ್ಮದಿಯಾಗಿ ಇರುವ ಬದಲಾಗಿ ಅಥವಾ ಯುದ್ಧಭೂಮಿಯಿಂದ ಹಿಂದೆ ಸರಿದು ನೆರೆ ರಾಷ್ಟ್ರಗಳಿಗೆ ತೆರಳಿ ಹೊಸ ಬದುಕು ಕಟ್ಟಿಕೊಳ್ಳುವ ಬದಲಾಗಿ ಉಕ್ರೇನ್ ಸೈನ್ಯವನ್ನು ಸೇರಿಕೊಂಡು ತಾಯ್ನೆಲದ ಪ್ರಾಣ ಕಾಪಾಡಲು ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ.
ರಷ್ಯಾ ಸೇನೆಯ ಬೆಂಗಾವಲು ಪಡೆಗೆ ಎದೆಯೊಡ್ಡಿದ ಉಕ್ರೇನ್ ಪ್ರಜೆ !
ರಷ್ಯಾ ಸೇನೆ ದಿನದಿಂದ ದಿನಕ್ಕೆ ಉಕ್ರೇನ್ ನಲ್ಲಿ ತನ್ನ ಕದಂಬಬಾಹುವನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಈ ನಡುವೆ, ರಷ್ಯಾದ ಮಿಲಿಟರಿ ಬೆಂಗಾವಲು ಪಡೆಯ ವಾಹನಗಳು ಉಕ್ರೇನ್ನ ರಾಜಧಾನಿ ಕೈವ್ ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ನಿಂತ ಉಕ್ರೇನ್ ಪ್ರಜೆಯೊಬ್ಬ ಬೆಂಗಾಲು ಪಡೆಯನ್ನು ತಡೆಯಲು ಪ್ರಯತ್ನ ಮಾಡಿದ್ದಾನೆ. ನೂರಾರು ಸಂಖ್ಯೆಯ ಮಿಲಿಟರಿ ಬೆಂಗಾವಲುಪಡೆ ವಾಹನ ದೇಶದೊಳಗೆ ನುಗ್ಗದಂತೆ ಏಕಾಂಗಿಯಾಗಿ ವ್ಯಕ್ತಿ ತಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್ ಆಗಿದೆ.
ರಷ್ಯಾ ಸೈನಿಕರಿಗೆ ಆಹಾರ ಸಿಗದಂತೆ ಮಾಡುತ್ತಿರುವ ಉಕ್ರೇನ್ ಪ್ರಜೆಗಳು !
ರಷ್ಯಾ ಸೇನೆಯು ಉಕ್ರೇನ್ ಮೇಲೆ ದಂಡೆತ್ತಿ ಬರುತ್ತಿದ್ದರೆ, ಇತ್ತ ಉಕ್ರೇನ್ ಸೈನಿಕರೊಂದಿಗೆ ಉಕ್ರೇನ್ ಪ್ರಜೆಗಳೂ ಕೂಡಾ ತಮ್ಮ ದೇಶದ ಉಳಿವಿಗಾಗಿ ವೀರಾವೇಶದಿಂದ ಹೋರಾಡುತ್ತಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುವ ರಷ್ಯಾ ಸೇನೆಯ ಮೇಲೆ ಕಾದು ಕುಳಿತು ಎರಗುತ್ತಿದ್ದಾರೆ ಉಕ್ರೇನ್ ಪ್ರಜೆಗಳು ಹಾಗೂ ಸೈನಿಕರು. ಇನ್ನು,ಉಕ್ರೇನ್ ಮೇಲೆ ದಂಡೆತ್ತಿ ಬಂದ ರಷ್ಯಾ ಸೇನೆಗೆ ರಷ್ಯಾ ಸರಕಾರ ಟ್ರಕ್ ಗಳ ಮೂಲಕ ಆಹಾರ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಪೂರೈಸುತ್ತಿದೆ. ರಷ್ಯಾ ಸೇನೆಯ ಬಲವನ್ನು ಕುಗ್ಗಿಸಲು ಉಕ್ರೇನ್ ಸೈನಿಕರು ಉಪಾಯ ಹೂಡಿದ್ದು, ರಷ್ಯಾ ಸೈನಿಕರಿಗೆ ಆಹಾರ, ಅಗತ್ಯ ಸಾಮಾಗ್ರಿ ಪೂರೈಕೆ ಮಾಡುವ ಟ್ರಕ್ ಗಳ ಮೇಲೆ ದಾಳಿ ಮಾಡಿ ಸುಟ್ಟು ಹಾಕುತ್ತಿದ್ದಾರೆ..
ನೀವು ಸತ್ತಾಗ ನಿಮ್ಮ ಜೇಬಿನಲ್ಲಿರುವ ಸೂರ್ಯಕಾಂತಿ ಬೀಜ ಮೊಳಕೆಯೊಡೆಯಲಿ !
ರಷ್ಯಾ ಸೈನ್ಯ ಬಲಿಷ್ಠವಾಗಿದ್ದರೂ ಸಹ ಉಕ್ರೇನ್ ತನ್ನ ಧೈರ್ಯವನ್ನು ಕಳೆದುಕೊಂಡಿಲ್ಲ. ಉಕ್ರೇನ್ ನ ಯಾವೊಬ್ಬ ಪ್ರಜೆಯೂ ಕೂಡಾ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ಇಂತಹ ಘಟನೆಗೆ ಉಕ್ರೇನ್ ನ ಮಹಿಳೆಯೊಬ್ಬರು ಸಾಕ್ಷಿಯಾಗಿದ್ದಾರೆ. ಉಕ್ರೇನ್ ನೆಲಕ್ಕೆ ಕಾಲಿಟ್ಟ ರಷ್ಯಾ ಸೈನಿಕನಿಗೆ ಎದುರಾದ ಉಕ್ರೇನ್ ಮಹಿಳೆಯೊಬ್ಬರು ರಷ್ಯಾ ಸೈನಿಕನಿಗೆ ಒಂದು ಮುಷ್ಠಿ ಸೂರ್ಯಕಾಂತಿ ಬೀಜವನ್ನು ನೀಡುತ್ತಾ "ನೀನು ಈ ಸೂರ್ಯಕಾಂತಿ ಬೀಜಗಳನ್ನು ನಿನ್ನ ಜೇಬಿನಲ್ಲಿ ಇರಿಸಿಕೊಳ್ಳಬೇಕು. ಇದರಿಂದ ನೀನು ಸತ್ತಾಗ ಉಕ್ರೇನ್ ನೆಲದ ಮೇಲೆ ಅವು ಬೆಳೆಯುತ್ತವೆ" ಎನ್ನುವ ಮಾತುಗಳು ನಮ್ಮಲ್ಲಿ ದೇಶದ ಮೇಲಿನ ಜಾಗೃತಿಯನ್ನು ಇಮ್ಮಡಿಗೊಳಿಸುತ್ತದೆ. ತನ್ನ ಸೇನೆ ರಷ್ಯಾದಷ್ಟು ಬಲಿಷ್ಠವಾಗಿರದೇ ಇದ್ದರೂ ಕೂಡಾ ರಷ್ಯಾ ಸೈನಿಕನನ್ನು ಹೊಡೆದುರುಳಿಸುತ್ತದೆ ಎನ್ನುವರ್ಥ ಉಕ್ರೇನ್ ಮಹಿಳೆಯ ಮಾತು ಉಕ್ರೇನ್ ಸೈನಿಕರಿಗೆ ಮತ್ತಷ್ಟು ಸ್ಫೂರ್ತಿಯಾಗಿರಲೂಬಹುದು.ಎರಡನೇ ವಿಶ್ವ ಯುದ್ಧದ ಭೀಕರತೆ ಮಾಸುವ ಮೊದಲೇ ಮೂರನೇ ವಿಶ್ವಯುದ್ಧಕ್ಕೆ ಮುನ್ನುಡಿ ಎಂಬಂತೆ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದೆ. ಪುಟ್ಟ ರಾಷ್ಟ್ರವಾದರೂ ಕೂಡಾ ದೈತ್ಯ ರಾಷ್ಟ್ರದ ಮುಂದೆ ಮಂಡಿಯೂರದೆ ತೊಡೆ ತಟ್ಟಿರುವ ಉಕ್ರೇನ್ ದೇಶದ ಪರಾಕ್ರಮಕ್ಕೆ ನಾವು ಶಹಬ್ಬಾಸ್ ಎನ್ನಲೇ ಬೇಕು. ಬಹುಶ: ಅಣು ಅಸ್ತ್ರ ಹೊಂದಿರುವ ರಷ್ಯಾಕ್ಕೆ ಉಕ್ರೇನ್ ನ ರಾಷ್ಟ್ರ ಪ್ರೇಮವೆಂಬ ಅತ್ಯಂತ ಬಲಶಾಲಿ ಅಸ್ತ್ರವನ್ನು ಎಂಟು ದಿನವಾದರೂ ಸೋಲಿಸಲು ಸಾಧ್ಯವಾಗದೇ ಇರುವುದು ನಿಜಕ್ಕೂ ಅದ್ಭುತವೇ ಸರಿ...! ಯುದ್ಧವೆಂದರೆ ಅದು ರಕ್ತಪಾತದ, ಸಾವು ನೋವುಗಳ ಕಠೋರವಾದ ದಿನಗಳನ್ನು ಬಿಟ್ಟು ಹೋಗುತ್ತದೆ. ಸಾಲು ಸಾಲು ಹೆಣಗಳ ಮಧ್ಯೆ, ಅಂಗಾಗಳನ್ನು ಕಳೆದುಕೊಂಡು ರಕ್ತದ ಮಡುವಿನಲ್ಲಿ ಒದ್ದಾಡುವ ಜೀವಗಳು ಒಂದೆಡೆಯಾದರೆ, ತನ್ನವರನ್ನು ಕಳೆದುಕೊಂಡವರ ರೋಧನ ! ಇನ್ನೂ ಜಗತ್ತನ್ನೇ ಅರಿಯದ ಪುಟ್ಟ ಕಂದಮ್ಮಗಳೂ ಸೇರಿದಂತೆ ವಯೋ ವೃದ್ಧರೂ ಕೂಡಾ ಯುದ್ಧದ ಭೀಕರತೆಗೆ ಬಲಿಯಾಗುತ್ತಾರೆ. ಹಾಗಾಗಿ, ಎದುರಾಗಿರುವಂತಹ ಯುದ್ದ ಆದಷ್ಟು ಶೀಘ್ರದಲ್ಲೇ ಅಂತ್ಯವಾಗಲಿ ಈ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯಾಗಲಿ.