ಬೆಳ್ತಂಗಡಿ, ಮಾ 03 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ಬೆಳ್ತಂಗಡಿ ಮೂಲದ ವಿದ್ಯಾರ್ಥಿನಿಯೋರ್ವಳು ಅಪಾಯದಲ್ಲಿರುವುದಾಗಿ ಮಾಹಿತಿ ಲಭಿಸಿದೆ. ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ದಿ. ಯಾಸಿನ್ ಮತ್ತು ಶಹನಾ ದಂಪತಿಯ ಪುತ್ರಿ, ಎಂಬಿಬಿಎಸ್ ಎರಡನೇ ವರ್ಷದಲ್ಲಿ ಕಲಿಯುತ್ತಿರುವ ಹೀನಾ ಫಾತಿಮಾ ಅವರೇ ಅಪಾಯದಲ್ಲಿರುವ ವಿದ್ಯಾರ್ಥಿನಿ.
ಎರಡು ದಿನದ ಹಿಂದಷ್ಟೇ ರಷ್ಯಾ ದಾಳಿಗೆ ಕಟ್ಟಡ ಸ್ಫೋಟಗೊಂಡು ಮೃತಪಟ್ಟ ಹಾವೇರಿಯ ನವೀನ್ ಅವರ ಬ್ಯಾಚ್ ಮೇಟ್ ಆಗಿರುವ ಹೀನಾ ಫಾತಿಮಾ ಅವರು ನವೀನ್ ಇದ್ದ ಕಟ್ಟಡದ ಕೇವಲ 100 ಮೀಟರ್ ಅಂತರದಲ್ಲಿ ಬಂಕರ್ ನಲ್ಲಿ ಅಡಗಿಕೊಂಡಿದ್ದಾರೆ. ಇಲ್ಲಿ ಕ್ಷಣಕ್ಷಣಕ್ಕೂ ಅಪಾಯದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಹೀನಾ ಫಾತಿಮಾ ಸೇರಿದಂತೆ ಚಿಕ್ಕಮಗಳೂರು, ಬೆಂಗಳೂರಿನವರು ಸೇರಿ ಕರ್ನಾಟಕದ ಐವರು ವಿದ್ಯಾರ್ಥಿಗಳು ಜೀವಭಯದಲ್ಲೇ ದಿನದೂಡುತ್ತಿದ್ದಾರೆ ಎಂಬುದಾಗಿ ಅವರ ಮಾವ ಆಬಿದ್ ಅಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿದೇಶಾಂಗ ಇಲಾಖೆ ಈಗಾಗಲೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಧೈರ್ಯ ತುಂಬುವ ಕೆಲಸ ಮಾಡಿದೆ. ಬುಧವಾರದಂದೇ ಹೊರಬರುವಂತೆ ನಿರ್ದೇಶಿಸಿದ್ದು, ರೈಲು ಮುಖಾಂತರ 1000 ಕಿಮೀ ದೂರದಲ್ಲಿರುವ ಲಿವಿನ್ ಗಡಿ ಪ್ರದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಆಲ್ಲಿಂದ ವಿಮಾನ ಮೂಲಕ ಭಾರತಕ್ಕೆ ಕರೆತರುವ ಪ್ರಯತ್ನವನ್ನು ಎಂಬೆಸ್ಸಿ ಮಾಡಲಿದೆ ಎಂಬ ಬಗ್ಗೆ ಮಾಹಿತಿ ದೊರಕಿದೆ ಎಂದವರು ತಿಳಿಸಿದರು.
ಆರಂಭದ ದಿನಗಳಲ್ಲಿ ಬಿಸ್ಕೆಟ್, ಬ್ರೆಡ್ ಖರೀದಿಸಲು ಹೊರಗಡೆ ಬಿಡಲಾಗುತ್ತಿತ್ತು. ಆದರೆ ನವೀನ್ ಸಾವು ಬಳಿಕ ಅಪಾಯದ ಸೂಚನೆ ರವಾನಿಸಿರುವುದರಿಂದ ಆಹಾರಕ್ಕೂ ಸಮಸ್ಯೆಯಾಗುತ್ತಿದೆ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ ಎಂದು ಆಬಿದ್ ಅಲಿ ಹೇಳಿದ್ದಾರೆ.