ಬಂಟ್ವಾಳ, ಮಾ 03 (DaijiworldNews/MS): ಸಜಿಪಮುನ್ನೂರು ಗ್ರಾಮದ ಇಂದಿರಾ ನಗರ ಹಾಗೂ ಶಾರದಾ ನಗರದ 10 ಮಂದಿ ಮಹಿಳೆಯರು ಮಲ್ಲಿಗೆ ಕೃಷಿಯನ್ನು ಆರಂಭಿಸಿದ್ದು, ಎರಡೂ ನಗರಗಳು ಕೆಲವೇ ದಿನಗಳಲ್ಲಿ ಮಲ್ಲಿಗೆ ನಗರಗಳಾಗುವ ಲಕ್ಷಣಗಳು ಗೋಚರಿಸುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ವತಿಯಿಂದ ಸ್ವಸಹಾಯ ಗುಂಪು ಹಾಗೂ ಪ್ರಗತಿ ಬಂಧು ತಂಡಗಳ ಸದಸ್ಯರಿಗೆ ಸ್ವ ಉದ್ಯೋಗದ ಪ್ರೇರೇಪಣೆ ನೀಡಲಾಗುತ್ತಿದೆ. ಅದರಂತೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಸಜಿಪಮುನ್ನೂರು ಗ್ರಾಮದ 10 ಮಂದಿ ಸ್ವಸಹಾಯ ಗುಂಪಿನ ಸದಸ್ಯರಿಗೆ ತಲಾ 25 ಮಲ್ಲಿಗೆ ಗಿಡಗಳನ್ನು ಒದಗಿಸಲಾಗಿದ್ದು, ಮಲ್ಲಿಗೆ ಕೃಷಿಗೆ ಪೂರಕವಾದ ತರಬೇತಿಯನ್ನೂ ನೀಡಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿಯವರ ಸಲಹೆ ಮಾರ್ಗದರ್ಶನದೊಂದಿಗೆ ಯೋಜನಾಧಿಕಾರಿ ಜಯಾನಂದ್ ಜಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಸ್ವಪ್ನ ರವರು ಗುಂಪುಗಳ ಸದಸ್ಯರಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ.
ಕಡಿಮೆ ಜಾಗದಲ್ಲಿಯೂ ಮಲ್ಲಿಗೆ ಕೃಷಿ ಮಾಡಬಹುದು ಎಂಬುದಕ್ಕೆ ಸಜಿಪಮುನ್ನೂರಿನ ಮಲ್ಲಿಗೆ ಮನೆಗಳೇ ಸಾಕ್ಷಿ.ಇಲ್ಲಿನ ಹತ್ತು ಮನೆಗಳ ಪೈಕಿ ಐದು ಮನೆಗಳ ಮಹಿಳೆಯರು ತಾರಸಿ ಯಲ್ಲಿ ಮಲ್ಲಿಗೆ ಕೃಷಿ ಮಾಡುತ್ತಿದ್ದು, ಉಳಿದ ಐವರು ಮನೆಯ ಅಂಗಳದಲ್ಲಿ ಮಲ್ಲಿಗೆ ಕೃಷಿಗೆ ಮುಂದಡಿಯಿಟ್ಟಿದ್ದಾರೆ. ಸಜಿಪಮುನ್ನೂರು ಗ್ರಾಮದ ಸೌಮ್ಯ, ಆಶ್ಮಿತಾ, ಬೇಬಿ, ಭವಾನಿ, ಸರೋಜಿನಿ, ಭಾರತಿ, ಯಶೋಧ, ಹೇಮಲತಾ, ಪ್ರೇಮ ಹಾಗೂ ಕುಸುಮಾವತಿಯವರು ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹೊಸಕನಸುಗಳನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಮಲ್ಲಿಗೆ ಕೃಷಿಯ ಕುರಿತಾಗಿ ಸದಸ್ಯರು ಸಂತಸ ಹಂಚಿಕೊಂಡಿದ್ದಾರೆ. ಸ್ವಾಭಿಮಾನದ ಜೊತೆಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವ ಧರ್ಮಸ್ಥಳ ಯೋಜನೆ ಜನರಲ್ಲಿ ಹೊಸಭರವಸೆಯನ್ನು ಬೆಳೆಸುತ್ತಿದೆ. ಸಜಿಪಮುನ್ನೂರು ಪರಿಸರದ ಈ ಹತ್ತು ಕುಟುಂಬಗಳ ಮಲ್ಲಿಗೆ ಗಿಡಗಳನ್ನು ಕಂಡು ತಮ್ಮ ಮನೆಗಳಲ್ಲೂ ಮಲ್ಲಿಗೆ ಬೆಳೆಸುವ ಹಂಬಲ ಹಲವರಲ್ಲಿ ಮೂಡಿದೆ.
ಮಲ್ಲಿಗೆ ಕೃಷಿಯ ಬಗ್ಗೆ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದೇವೆ. ಯೋಜನೆಯ ಕೃಷಿ ಅಧಿಕಾರಿಗಳೂ ತರಬೇತಿ ಮಾರ್ಗದರ್ಶನ ನೀಡುತ್ತಿದ್ದಾರೆ.ಕಡಿಮೆ ಜಾಗದಲ್ಲಿಮಲ್ಲಿಗೆ ಕೃಷಿ ಮಾಡಬಹುದು ಎಂಬುದು ಗೊತ್ತಿರಲಿಲ್ಲ. ಇದೀಗ ಮನೆಗಳ ಥಾರಸಿ ಹಾಗೂ ಅಂಗಳದಲ್ಲಿ ಮಲ್ಲಿಗೆ ಕೃಷಿ ಮಾಡುವುದಕ್ಕೆ ಮುಂದಾಗಿದ್ದೇವೆ ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡ ಬೇಬಿ ಮತ್ತು ಅಶ್ಮಿತಾ.
"ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸದಸ್ಯರ ಸ್ವಾವಲಂಬಿ ಬದುಕಿಗೆ ಹಲವು ರೀತಿಯಲ್ಲಿ ಪ್ರೇರಣೆ ನೀಡುತ್ತಿದೆ. ಮಲ್ಲಿಗೆ ಕೃಷಿಯ ಮೂಲಕ ಸದಸ್ಯರು ಆದಾಯ ಗಳಿಸಬಹುದಾಗಿದ್ದು, ಪೂರಕ ತರಬೇತಿ-ಮಾರ್ಗದರ್ಶನ ನೀಡುವ ಕಾರ್ಯ ಜ್ಞಾನವಿಕಾಸ ಕೇಂದ್ರಗಳ ಮೂಲಕ ನಡೆಸಲಾಗುತ್ತಿದೆ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ.