ಮಂಗಳೂರು, ಮಾ 02 (DaijiworldNews/SB): ಮತಾಂತರ ಕಾಯ್ದೆ ನೆಪದಲ್ಲಿ ದೇಶ ಹಾಗೂ ರಾಜ್ಯದ್ಯಂತ ಕೈಸ್ತರ ಹಾಗೂ ಕ್ರೈಸ್ತ ಆರಾಧನಾ ಕೇಂದ್ರಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ವಿರೋಧಿಸಿ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಸಮಾಜ ಸೇವೆಯಲ್ಲಿ ಅತೀ ಮುಂಚೂಣಿಯಲ್ಲಿರುವ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಅರೋಪಿಸಿದ ಪ್ರತಿಭಟನೆಗಾರರು ಸಂವಿಧಾನ್ಮಕ ಹಕ್ಕುಗಳ ಧ್ವಂಸನ ಸಲ್ಲದು ಎಂದು ಒತ್ತಾಯಿಸಿದರು.
ಕ್ಯಾಂಡಲ್ ಲೈಟ್ ಮಾರ್ಚಿನೊಂದಿಗೆ ಪ್ರಾರ್ಥನೆ ಮಾಡುತ್ತಾ ರಸ್ತೆಗಳ ಉದ್ದಗಲಕ್ಕೂ ಶಿಸ್ತುಬದ್ಧವಾಗಿ ಶಾಂತಿಯುತವಾಗಿ ಪ್ರತಿಭಟಿಸಿದ ಕ್ರೈಸ್ತ ಭಾಂದವರು ಧರ್ಮಗಳ ಹೆಸರಿನಲ್ಲಿ ದೇಶದ ವಿಭಜನೆಯಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತೀ ಮಾರಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಜೆ ಆರು ಗಂಟೆಗೆ ಏಕ ಕಾಲದಲ್ಲಿ ನಗರದ ರೊಸಾರಿಯೋ, ಮಿಲಾಗ್ರಿಸ್, ಬಿಜೈ, ಬೆಂದುರ್, ಬೋಂದೆಲ್ ಸೇರಿದಂತೆ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಇಗರ್ಜಿಗಳ ವ್ಯಾಪ್ತಿಗೊಳಪಡುವ ಕ್ರೈಸ್ತ ಭಾಂದವರು ನಗರದ ಬೀದಿಗಳಲ್ಲಿ ಸಾವಿರಾರು ಸಂಖೆಯಲ್ಲಿ ಪ್ರತಿಭಟನೆಯಲ್ಲಿ ಪಾಳ್ಗೊಂಡಿದ್ದರು. ಗ್ರಾಮೀಣ ಪ್ರದೇಶಗಳಲ್ಲೂ ಪ್ರತಿಭಟನೆಯಲ್ಲಿ ಸಾವಿರಾರು ಕ್ರೈಸ್ತರು ಭಾಗಿಯಾಗಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧಕ್ಷರಾದ ಬಿಶಪ್ ಪೀಟರ್ ಪೌಲ್ ಸಲ್ಡಾನ ಸೇರಿದಂತೆ ಎಲ್ಲಾ ಕ್ರೈಸ್ತ ಧರ್ಮಗುರುಗಳು ,ಧರ್ಮಭಗಿನಿಯರು , ಕಥೋಲಿಕ್ ಸಭಾ, ಐಸಿವೈಎಂ ಮತ್ತಿತರ ಕ್ರೈಸ್ತ ಸಂಘಟನೆಗಳು ಪ್ರತಿಭಟನೆಗೆ ನೇತೃತ್ವ ನೀಡಿದರು.