ಉಡುಪಿ, ಫೆ 27 (DaijiworldNews/HR): ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ, ವೈದ್ಯಕೀಯ ಪ್ರಕೋಷ್ಟ ಉಡುಪಿ ಮತ್ತು ವಸಂತಿ ಎಂ ಪೈ ಪ್ರತಿಷ್ಟಾನ ವತಿಯಿಂದ ಆಯೋಜಿಸಿದ್ದ ಆರೋಗ್ಯಕ್ಕಾಗಿ ಸೈಕ್ಲಿಂಗ್ ಜಾಥಾವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲದಲ್ಲಿ ಉದ್ಘಾಟಿಸಿದರು.
ಮಣಿಪಾಲದಿಂದ ಮಲ್ಪೆ ಸೀ ವಾಕ್ ತನಕ ನಡೆದ ಸೈಕ್ಲಿಂಗ್ ಜಾಥಾದಲ್ಲಿ ಸುಮಾರು 110 ಕ್ಕೂ ಅಧಿಕ ಸೈಕಲ್ ಸವಾರರು ಪಾಲ್ಗೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, "ಆರೋಗ್ಯಕರ ದೇಹವು ಆರೋಗ್ಯಕರ ಮನಸ್ಸನ್ನು ಹೊಂದಿದೆ, ಸದೃಢವಾದ ದೇಶವನ್ನು ನಿರ್ಮಿಸುವ ನಮ್ಮ ಪ್ರಧಾನ ಮಂತ್ರಿಗಳ ದೂರದೃಷ್ಟಿಯನ್ನು ನಾವೆಲ್ಲರೂ ಬೆಂಬಲಿಸಬೇಕು" ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಸ್ವತಹ ಸೈಕಲ್ ಸವಾರಿ ನಡೆಸಿ ಸ್ವಾಮೀಜಿಗಳು ಇತರ ಸೈಕ್ಲಿಸ್ಟ್ ಗಳನ್ನು ಬೆರಗುಗೊಳಿಸಿದರು.
ಇದೇ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದ ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಡಿಜಿಎಂ ಪದ್ಮಾವತಿ ಅವರು "ಇಂದಿನ ಯುವಜನತೆ ಫಿಟ್ನೆಸ್ ಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಬದಲಾದ ಜೀವನಶೈಲಿಯಲ್ಲಿ ಫಿಟ್ನೆಸ್ ಪ್ರಮುಖ ಪಾತ್ರವಹಿಸಿದೆ. ಇಂದಿನ ಕಾರ್ಯಕ್ರಮವನ್ನು ಪ್ರಾಯೋಜಿಸಲು ಕೆನರಾ ಬ್ಯಾಂಕ್ ಹೆಮ್ಮೆ ಪಡುತ್ತದೆ" ಎಂದರು .
ರಾಜ್ಯ ವೈದ್ಯಕೀಯ ಪ್ರಕೋಷ್ಟದ ಡಾಕ್ಟರ್ ವಿಜಯೇಂದ್ರ ರಾವ್ ಭಾಗವಹಿಸಿದ ಸೈಕ್ಲಿಸ್ಟ್ ಗಳಿಗೆ ಕ್ವಿಜ್ ಅನ್ನು ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ವೈದ್ಯಾಧಿಕಾರಿ ಡಾ ನಾಗಭೂಷಣ ಉಡುಪ, ವೈದ್ಯಕೀಯ ಪ್ರಕೋಷ್ಟದ ಸಹ ಸಂಚಾಲಕರಾದ ಡಾಕ್ಟರ್ ವಿದ್ಯಾದರ ಶೆಟ್ಟಿ, ಸಂಚಾಲಕರಾದ ಡಾಕ್ಟರ್ ರಾಮಚಂದ್ರ ಕಾಮತ್, ಭಾರತೀಯ ವಿಕಾಸ್ ಟ್ರಸ್ಟ್ ನ ಡಾಕ್ಟರ್ ಜಗದಿಶ್ ಪೈ ಮತ್ತು ಇತರರು ಉಪಸ್ಥಿತರಿದ್ದರು.