ಬಂಟ್ವಾಳ,ಫೆ 26 (DaijiworldNews/HR): ಕಾಂಗ್ರೆಸ್ ನ ಜನವಿರೋಧಿ ನೀತಿಯನ್ನು ಖಂಡಿಸಿ ಬಂಟ್ವಾಳ ಮಂಡಲ ಬಿಜೆಪಿ ವತಿಯಿಂದ ಶನಿವಾರ ಬಿ.ಸಿ.ರೋಡಿನ ಪ್ಲೈಒವರ್ ಬಳಿ ಪ್ರತಿಭಟನಾ ಸಭೆ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಭೆಯನ್ನುದ್ದೇಶಿಸಿ ಮಾತನಾಡಿ,ವಿಧಾನಮಂಡಲದ ಅಧಿವೇಶನಕ್ಕೆ ದಿನವೊಂದಕ್ಕೆ 80 ಲಕ್ಷ ದಿಂದ 1 ಕೋ.ರೂ. ಖರ್ಚಾಗುತ್ತದೆ. ಕ್ಷೇತ್ರದ ಸಮಸ್ಯೆಯನ್ನು ವಿಧಾನಮಂಡಲದಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನರು ನಮ್ಮನ್ನು ಶಾಸಕರನ್ನಾಗಿ ಆರಿಸಿ ಕಳಿಸಿದ್ದಾರೆ. ಆದರೆ ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಚರ್ಚೆ,ಕಲಾಪವನ್ನೇ ನಡೆಸಲು ಬಿಡದ ಕಾಂಗ್ರೆಸ್ ಪಕ್ಷ ಜನವಿರೋಧಿ ನೀತಿಯನ್ನು ಅನುಸರಿಸಿರುವುದನ್ನು ಖಂಡಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ,ಮುಖ್ಯಮಂತ್ರಿಯವರ ಮಾತಿಗೂ ಅಡ್ಡಿ ಪಡಿಸಿ, ಕಲಾಪವನ್ನೇ ಮುಂದೂಡಲು ಕಾರಣಕರ್ತರಾದ ಕಾಂಗ್ರೆಸ್ ಪಕ್ಷ ಹಿಜಾಬ್ ಪ್ರಕರಣ ತಮಗಾದ ಹಿನ್ನಡೆಯನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷ ಈ ಕುತಂತ್ರ ನಡೆಸಿದೆ ಎಂದು ಟೀಕಿಸಿದ ಶಾಸಕರು ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು,ಕರ್ನಾಟಕದಲ್ಲಿಯು ಮುಂದಿನ ಚುನಾವಣೆಯಲ್ಲಿ ಧೂಳೀಟವಾಗಲಿದೆ ಎಂದರು.
ಪ್ರಧಾನ ಭಾಷಣಗೈದ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಹಿಜಾಬ್ ಮತ್ತು ರಾಷ್ಟ್ರಧ್ವಜದ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಜನರ ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದ್ದು, ಕಾಂಗ್ರೆಸ್ ನ ಡೋಂಗಿ ಮುಖವಾಡವನ್ನು ಅನಾವರಣಗೊಳಿಸಲು ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ತೆರಳುದ 6 ಮಂದಿ ರಾಷ್ಟ್ರಭಕ್ತರನ್ನು ಗುಂಡಿಕ್ಕಿ ಕೊಲ್ಲಿಸಿದ ಅಂದು ರಾಜ್ಯದಲ್ಲಿದ್ದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರಧ್ವಜದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಟೀಕಾಪ್ರಾರಗೈದ ಹರಿಕೃಷ್ಣ ಬಂಟ್ವಾಳ ಹಿಜಾಬ್ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕಾಂಗ್ರೆಸ್ ನ ಕಾನೂನು ವಿಭಾಗದ ವಕೀಲರೇ ವಾದಿಸಿದರೆ, ಯುವ ಕಾಂಗ್ರೆಸ್ ಅಧ್ಯಕ್ಷ ಸು.ಕೋ.ಮೊರೆ ಹೋಗುವ ಮೂಲಕ ಇದರ ಹಿಂದಿರುವ ಕಾಂಗ್ರೆಸ್ ನ ಮುಖವಾಡ ಬಯಲಾಗಿದೆ ಎಂದರು.
ಎಲ್ಲರೂ ಸಮಾನವಾಗಿ ಬದುಕುವ ಭಾರತ ಧರ್ಮದನಾಡಾಗಿದ್ದು, ಶಿಕ್ಷಣ ಮೊದಲ ಹಾಗೂ ಧರ್ಮ ಎರಡನೆ ಆದ್ಯತೆಯಾಗಬೇಕು ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಗಮನಕೊಟ್ಟು ಭವ್ಯ ಭಾರತದ ಪ್ರಜೇಗಳಾಗಬೇಕು ಎಂದಿದ್ದಾರೆ.
ವಿಧಾನಮಂಡಲದ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಗೂಂಡಾ ವರ್ತನೆಯನ್ನು ಖಂಡಿಸಿದ ಹರಿಕೃಷ್ಣ ಬಂಟ್ವಾಳ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರಲ್ಲದೆ ಭಾರತವನ್ನು ಇಸ್ಲಾಮೀಕರಣವನ್ನಾಗಿಸಲು ಯಾವುದೇ ಕಾರಣಕ್ಕು ಸಾಧ್ಯವಿಲ್ಲ ಎಂದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಇದೇ ವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊಲೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶೃದ್ದಾಂಜಲಿ ಅರ್ಪಿಸಲಾಯಿತು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಕೆಯುಡಬ್ಲುಸಿ ನಿರ್ದೇಶಕಿ ಸುಲೋಚನಾ ಜಿ.ಕೆ ಭಟ್,ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ , ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ,ಭೂ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ,ಮಹಿಳಾ ಮೋರ್ಛಾ ಅಧ್ಯಕ್ಷೆ ಭಾರತಿ ಶೆಟ್ಟಿ,ಜಿಪಂ ಮಾಜಿ ಸದಸ್ಯರಾದ ತುಂಗಪ್ಪ ಬಂಗೇರ,ಕಮಾಲಾಕ್ಷಿ ಪೂಜಾರಿ,ಪುರಸಭಾ ಸದಸ್ಯರಾದ ಗೋವಿಂದ ಪ್ರಭು,ಹರಿಪ್ರಸಾದ್, ಪಕ್ಷದ ಪ್ರಮುಖರಾದ ಮೋನಪ್ಪ ದೇವಸ್ಯ,ರಮಾನಾಥ ರಾಯಿ,ದಿನೇಶ್ ಅಮ್ಟೂರು,ಗಣೇಶ್ ರೈ ಮಾಣಿ,ಪುರುಷೋತ್ತಮ ಶೆಟ್ಟಿ ವಾಮದಪದವು, ಕೇಶವ ದೈಪಲ,ಜನಾರ್ದನ ಬೊಂಡಾಲ, ಸಂದೇಶ್ ಶೆಟ್ಟಿ,ಸೀಮಾ ಮಾಧವ, ಹರ್ಪೀಣಿ ಮೊದಲಾದವರಿದ್ದರು.ಮಂಡಲದ ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ ಸ್ವಾಗತಿಸಿ,ವಂದಿಸಿದರು.